CRECT Education

Class 6 Kannada Lesson 13: A Letter About Yana | KTBS Kannada First Language – Learn the Story

Description

Learn the story of Raju and friends as they discover email and a letter about Yana's natural wonders, with vocabulary from the KTBS Class 6 First Language Kannada textbook.

ಗದ್ಯ (prose) · ಸಮಿತಿ ರಚನೆ (Committee-authored)

ಪಠ್ಯFull text

ಸಲೀಂ, ರಾಗಿಣಿ, ಜೆನಿಫರ್ ಹಾಗೂ ಶಂಕರ ಪ್ರತಿದಿನ ಜೊತೆಯಾಗಿ ಓದಿಕೊಳ್ಳಲು ಗೆಳೆಯ ರಾಜುವಿನ ಮನೆಗೆ ಬರುತ್ತಿದ್ದರು. ಆಯಾ ದಿನ ಶಾಲೆಯಲ್ಲಿ ನಡೆದ ಪಾಠದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಅದೊಂದು ಭಾನುವಾರ. ಎಲ್ಲರೂ ರಾಜುವಿನ ಮನೆಗೆ ಬಂದರು. ಸಲೀಂ ಗೆಳೆಯರ ಬಳಿ 'ಈಗ ನಾವೊಂದು ಆಟ ಆಡೋಣ. ಆ ಮೇಲೆ ಓದಿಕೊಳ್ಳೋಣ' ಎಂದನು. ಯಾವ ಆಟ ಎಂಬುದರ ಬಗ್ಗೆ ಜೋರಾಗಿ ಚರ್ಚೆ ನಡೆಯಿತು. ಆಗ ಒಳಗಿನಿಂದ ಬಂದ ರಾಜುವಿನ ಅಮ್ಮ "ಯಾರೂ ಗಲಾಟೆ ಮಾಡಬೇಡಿ. ರಾಜುವಿನ ಅಪ್ಪ ಕಂಪ್ಯೂಟರ್‌ನಲ್ಲಿ ಏನೋ ಕೆಲಸ ಮಾಡುತ್ತಿದ್ದಾರೆ" ಎಂದು ಹೇಳಿ ಒಳಗೆ ಹೋದರು. ಆಗ ರಾಗಿಣಿ, "ಈ ಸಲೀಂನಿಗೆ ಯಾವಾಗ್ಯೂ ಬರೀ ಆಟದ್ದೆ ಚಿಂತೆ. ನಿನ್ನೆ ಪದ್ಮಿನಿ ಮೇಡಂ ನಮಗೆಲ್ಲಾ ಕಂಪ್ಯೂಟರ್‌ನಲ್ಲಿ ವಿಶೇಷ ಪತ್ರ ಬರೆಯುವ ಬಗ್ಗೆ ಹೇಳಿಕೊಡಲಿಲ್ವೆ" ಎಂದು ವಿಷಯಕ್ಕೆ ಬಂದಳು. ಆಗ ಎಲ್ಲರೂ "ಹೌದಲ್ವ" ಎಂದು ಪತ್ರ ಬರೆಯುವ ಕುರಿತ ಚರ್ಚೆಗೆ ತಿರುಗಿದರು. ಅಷ್ಟರಲ್ಲಿ ರಾಜುವಿನ ತಂದೆ ಸುಂದರ್ ಹೊರಗೆ ಬಂದರು. "ಏನು ಮಕ್ಕಳೇ, ಏನು ನಡೆಸಿದ್ದೀರಿ?" ಎಂದು ಕೇಳಿದರು. ಅದಕ್ಕೆ ಚೂಟಿ ರಾಗಿಣಿಯು ಪದ್ಮಿನಿ ಮೇಡಂ ಹೇಳಿದ ಗೃಹಪಾಠದ ಬಗ್ಗೆ ತಿಳಿಸಿ, "ಅದನ್ನು ಹೇಗೆ ಬರೆಯುವುದು ಎಂದು ತಿಳಿಯದೆ ಚರ್ಚೆ ಮಾಡ್ತಾ ಇದ್ದೇವೆ ಮಾಮ" ಎಂದಳು. ಆಗ ಸುಂದರ್, 'ಬನ್ನಿ' ಎಂದು ಎಲ್ಲರನ್ನು ಕಂಪ್ಯೂಟರ್ ಕೊಠಡಿಗೆ ಕರೆದುಕೊಂಡು ಹೋಗಿ 'ಇ-ಅಂಚೆ' ಅಥವಾ 'ಇ-ಮೇಲ್' ಬಗ್ಗೆ ಕಂಪ್ಯೂಟರಿನಲ್ಲಿ ತೋರಿಸುತ್ತಾ 'ಇ-ಮೇಲ್' ಅಂದರೆ ಕಂಪ್ಯೂಟರ್ ಮೂಲಕ ಪತ್ರಗಳನ್ನು, ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುವ ಒಂದು ಜನಪ್ರಿಯ ವಿಧಾನ ಎಂದರು. ಸಲೀಂ ಕುತೂಹಲದಿಂದ, "ಅಂಕಲ್, ಇ-ಮೇಲ್ ಎಂದರೇನು? ಎಂದು ಕೇಳಿದನು. ಅದಕ್ಕೆ ಸುಂದರ್ 'ಇ'ಅಂದರೆ ಇಂಗ್ಲಿಷಿನಲ್ಲಿ 'ಎಲೆಕ್ಟ್ರಾನಿಕ್', 'ಮೇಲ್' ಎಂದರೆ 'ಅಂಚೆ' ಹಾಗಾಗಿ ಎಲೆಕ್ಟ್ರಾನಿಕ್ ಮೇಲ್ ಅನ್ನು 'ಇ-ಅಂಚೆ' ಎನ್ನುತ್ತಾರೆ ಎಂದರು. ಶಂಕರ್-"ಮಾಮ, ಇ-ಮೇಲ್ ಅನ್ನು ಹೇಗೆ ಕಳಿಸ್ತಾರೆ? ಮತ್ತೆ ಇದನ್ನು ಎಲ್ಲಿ, ಯಾರು ಓದಬಹುದು?" ಎಂದು ಕೇಳಿದ. ಅದಕ್ಕೆ ಸುಂದರ್- "ನೋಡಿ ಮಕ್ಕಳೇ, ಮಾಮೂಲಿ ಅಂಚೆ ವ್ಯವಸ್ಥೆಯಂತೆ ಇಲ್ಲಿಯೂ ಪತ್ರ ತಲುಪಬೇಕಾದ ವಿಳಾಸಬೇಕು. ಇದಕ್ಕೆ 'ಇ-ಮೇಲ್' ವಿಳಾಸ ಅನ್ನುತ್ತಾರೆ. ನೀವು ನನಗೆ ಕಳುಹಿಸಿದ ಇ-ಮೇಲ್ ಅನ್ನು ನಾನು ಕಂಪ್ಯೂಟರಿನಲ್ಲಿ ತೆರೆದು ಓದಬೇಕೆಂದರೆ ನನ್ನದೇ ಆದ 'ಗುಪ್ತ ಸಂಕೇತ' (Pass word) ಇರುತ್ತದೆ. ಅದನ್ನು ಬಳಸಿ ತೆರೆದು ಓದಬಲ್ಲೆ. ಈಗ ನಿಮಗೇನು ಬೇಕು? ಪದ್ಮಿನಿ ಮೇಡಂ ವಿಶೇಷ ಪತ್ರ ಬರೆದುಕೊಂಡು ಬರಲು ಹೇಳಿದ್ದಾರೆ. ಅಷ್ಟೇತಾನೆ? ಈಗ ನಿಮಗೊಂದು ವಿಶೇಷ ಪತ್ರ ತಯಾರಿಸಿ, ಕಳಿಸುತ್ತೇನೆ. ಅದನ್ನು ನಿಮ್ಮ ಶಾಲೆಯ ಕಂಪ್ಯೂಟರ್‌ನಲ್ಲಿ ತೆರೆದು ತೋರಿಸಿ" ಎಂದರು. ಅದಕ್ಕೆ ರಾಗಿಣಿ, "ಅದು ಹೇಗೆ ಮಾಮ!" ಎಂದಳು. ಆಗ ಸುಂದರ್ "ನನ್ನ ಮಗನಿಗೆ ಕಂಪ್ಯೂಟರ್ ಬಳಸುವ ಬಗ್ಗೆ ಸ್ವಲ್ಪ ಗೊತ್ತಿದೆ. ಅವನ ಹೆಸರಿನಲ್ಲಿ ಒಂದು 'ಇ-ಮೇಲ್' ತಯಾರಿಸಿ ಒಂದು ಗುಪ್ತ ಸಂಕೇತ ಕೊಡುತ್ತೇನೆ. ನೋಡುತ್ತಿರಿ" ಎಂದರು. ಸುಂದರ್ 'ಇ-ಮೇಲ್' ರಚಿಸುವುದನ್ನು ಮಕ್ಕಳು ಕುತೂಹಲದಿಂದ ಗಮನಿಸಿದರು. ಸುಂದರ್, ರಾಜುವಿನ ಹೆಸರಿನಲ್ಲಿ ಒಂದು ಇ-ಮೇಲ್ ವಿಳಾಸ ತಯಾರಿಸಿದರು. ಅದರ ಗುಪ್ತ ಸಂಕೇತವನ್ನು ರಾಜುವಿಗೆ ಮಾತ್ರ ಗುಟ್ಟಾಗಿ ತಿಳಿಸಿದರು. ಆಗ ಸಲೀಂ "ಮಾಮ, ಅದೇಕೆ ಗುಪ್ತ ಸಂಕೇತವನ್ನು ರಾಜುವಿಗೆ ಮಾತ್ರ ಹೇಳಿದಿರಿ. ನಮಗೆ ಹೇಳಿಲ್ಲ ಯಾಕೆ?" ಎಂದ. ಅದಕ್ಕೆ ಸುಂದರ್, "ನೋಡು ಸಲೀಂ, ಒಬ್ಬರ ಗುಪ್ತ ಸಂಕೇತ ಇನ್ನೊಬ್ಬರಿಗೆ ಗೊತ್ತಾಗಬಾರದು. ಗೊತ್ತಾದರೆ ಯಾರು ಬೇಕಾದರೂ ಪತ್ರ ಓದಬಹುದಲ್ಲವೆ? ಬೇರೆಯವರ ಪತ್ರ ನಾವು ಓದಬಾರದಲ್ವೆ? ಅದಕ್ಕಾಗಿ ಗುಪ್ತ ಸಂಕೇತ ಅವನಿಗೆ ಮಾತ್ರ ಹೇಳಿದ್ದು" ಎಂದರು. rajusundar@gmail.com ಎಂಬುದು ರಾಜುವಿನ ಇ-ಮೇಲ್ ವಿಳಾಸ. "ಮಕ್ಕಳೇ, ರಾಜುವಿನ ಇ-ಮೇಲ್ ವಿಳಾಸಕ್ಕೆ ನನ್ನ ಮೇಲ್‌ನಿಂದ ಚಾರಣಕ್ಕೆ ಪ್ರಸಿದ್ಧವಾದ ಯಾಣದ ಕೆಲವು ಚಿತ್ರ ಹಾಗೂ ವಿವರವನ್ನು ಕಳುಹಿಸುತ್ತೇನೆ" ಎಂದರು. ಅನಂತರ ಇ-ಮೇಲ್ ತೆರೆಯುವುದರ ಬಗ್ಗೆ ರಾಜುವಿಗೆ ತಿಳಿಸಿದರು. ರಾಜು ಇಮೇಲ್ ತೆರೆದ. ಆ ಲೇಖನವನ್ನು ರಾಜು ತನ್ನ ಗೆಳೆಯನಿಗೆ ಬರೆದ ಪತ್ರದಂತೆ ಬದಲಾಯಿಸಿಕೊಳ್ಳಲು ಸುಂದರ್ ಸಲಹೆ ನೀಡಿದರು. ಮಕ್ಕಳೆಲ್ಲರು: "ನೀವು ನಮಗೆ ಒಳ್ಳೆಯ ಮಾಹಿತಿ ಹೇಳಿದ್ದೀರಿ ಮಾಮ. ಇ-ಮೇಲ್ ಬಗ್ಗೆ ಹೇಳಿಕೊಟ್ಟು ಮಾದರಿ ಸಹಿತ ವಿವರಿಸಿದ್ದೀರಿ. ನಿಮಗೆ ಧನ್ಯವಾದಗಳು" ಎಂದು ಹೇಳಿ ಅಲ್ಲಿಂದ ಹೊರಟರು. ಮಾರನೆಯ ದಿನ ಮಕ್ಕಳೆಲ್ಲ ಶಾಲೆಗೆ ಬಂದರು. ಪದ್ಮಿನಿ ಮೇಡಂ, "ಮಕ್ಕಳೇ ಶನಿವಾರ ನಾನು ಪತ್ರ ಲೇಖನದ ಬಗ್ಗೆ ತಿಳಿಸಿ, ವಿಶೇಷ ಪತ್ರ ಬರೆದುಕೊಂಡು ಬರಲು ಹೇಳಿದ್ದೆ. ಯಾರು ಈ ಪ್ರಯತ್ನ ಮಾಡಿದ್ದೀರಿ? ಎಂದರು. ಆಗ ರಾಜು, ರಾಗಿಣಿ, ಸಲೀಂ, ಜೆನಿಫರ್ ಹಾಗು ಶಂಕರ್ ಎದ್ದು ನಿಂತು, "ಟೀಚರ್, ನಮ್ಮನ್ನು ಕಂಪ್ಯೂಟರ್ ಕೊಠಡಿಗೆ ಕರೆದುಕೊಂಡು ಹೋಗಿ, ಅಲ್ಲಿ ನಿಮಗೆ ನಮ್ಮ ವಿಶೇಷ ಪತ್ರ ತೋರಿಸುತ್ತೇವೆ" ಎಂದರು. ಎಲ್ಲರೂ ಕಂಪ್ಯೂಟರ್ ಕೊಠಡಿಗೆ ಹೋದರು. ರಾಜು ಕಂಪ್ಯೂಟರ್ ತೆರೆದು ಯಾರಿಗೂ ಕಾಣದ ಹಾಗೆ ತನ್ನ ಗುಪ್ತ ಸಂಕೇತ ಬಳಸಿ 'ಇ-ಮೇಲ್'ನಲ್ಲಿದ್ದ ಪತ್ರವನ್ನು ತೆರೆದು ತೋರಿಸಿದ. ಅದರಲ್ಲಿನ ಯಾಣದ ಚಿತ್ರಗಳನ್ನು ಹಾಗೂ ಅದರ ವಿವರಗಳನ್ನು ರಾಗಿಣಿ ಮತ್ತು ಜೆನಿಫರ್ ಓದಿದರು....... ಪ್ರೀತಿಯ ಸಲೀಂ, ಮಲೆನಾಡಿನ ಪ್ರವಾಸಿ ತಾಣಗಳಲ್ಲಿ ಗಗನಚುಂಬಿ ಹೆಬ್ಬಂಡೆಗಳ ತಾಣವಾದ ಯಾಣ ಕೂಡ ಒಂದು. ಶಿರಸಿಯಿಂದ ಯಾಣ ಎಂಬ ಹಳ್ಳಿ ತಲುಪಿ ಅಲ್ಲಿಂದ ೨ಕಿ.ಮೀ ಕಾಲುದಾರಿಯಲ್ಲಿ ಪ್ರಯಾಣಿಸಬೇಕು. ಬಹಳ ಇಕ್ಕಟ್ಟಾದ ಕಾಡಿನ ದಾರಿಯಲ್ಲಿ ಸಾಗುವಾಗ ಸುಸ್ತಾಗುತ್ತದೆ. ಹೀಗೆ ಸಾಗುವಾಗ ತಂಪು ಗಾಳಿಯ ಅನುಭವ ಹಿತ ನೀಡುತ್ತದೆ. ಮುಂದೆ ಸಾಗಿದರೆ ನಮಗೆ ಮೋಹಿನಿ ಶಿಖರ ಎದುರಾಗುತ್ತದೆ. ಇದು ಸುಮಾರು ೩೦೦ ಅಡಿ ಎತ್ತರವಿದೆ. ಈ ಶಿಖರವನ್ನು ನೋಡುತ್ತಾ ಮುಂದುವರಿದರೆ ಮೈ ರೋಮಾಂಚನಗೊಳಿಸುವ ೩೯೦ ಅಡಿ ಎತ್ತರದ ಭೈರವೇಶ್ವರ ಶಿಖರ ಕಾಣುತ್ತದೆ. ಈ ಶಿಖರ ಕಪ್ಪು ಕಲ್ಲಿನ ಉಕ್ಕಿನ ಕೋಟೆಯಂತಿದೆ. ಪ್ರಕೃತಿ ಮಾತೆಯೆ ಶಿಲ್ಪಿಯ ರೂಪು ತಾಳಿ ಇಲ್ಲಿನ ಆಕೃತಿಗಳನ್ನು ಕೆತ್ತಿದಳೆ? ಎಂಬಷ್ಟರ ಮಟ್ಟಿಗೆ ಆ ದೃಶ್ಯಗಳು ನೋಡುಗರನ್ನು ಚಕಿತಗೊಳಿಸುತ್ತವೆ. ಯಾಣದ ಕುರಿತಾದ ಒಂದು ದಂತಕಥೆಯಿದೆ. ಪುರಾಣ ಕಾಲದಲ್ಲಿ ಯಾಣದಲ್ಲಿ ಭಸ್ಮಾಸುರನೆಂಬ ರಾಕ್ಷಸ ವಾಸವಾಗಿದ್ದ. ಈತನ ಉಪಟಳ ಸಹಿಸಲು ಅಸಾಧ್ಯವಾದಾಗ ಶಿವನು ಆತನನ್ನು ಸುಟ್ಟು ಬೂದಿ ಮಾಡಿದ. ಈ ಬೂದಿಯಿಂದ ದೊಡ್ಡದಾದ ಶಿಖರ ಬೆಳೆಯಿತು ಎಂಬುದೇ ಆ ದಂತಕಥೆ. ಆದರೆ ಭೂಗರ್ಭ ಶಾಸ್ತ್ರದ ಸಂಶೋಧನೆ ಪ್ರಕಾರ ಅತಿ ಹೆಚ್ಚು ಖನಿಜ ಸಂಪತ್ತಿನಿಂದ, ಸುಣ್ಣದ ಕಲ್ಲಿನಿಂದ ಕೂಡಿದ ಜಾಗ ಇದಾಗಿದೆ. ಇಲ್ಲಿನ ಕಲ್ಲಿನ ಗುಹೆಯೊಳಗೆ ಪ್ರವೇಶಿಸುವುದು ಒಂದು ಸುಂದರ ಅನುಭವ. ಯಾಣ ಕುಮಟ ತಾಲ್ಲೂಕಿಗೆ ಹೊಂದಿಕೊಂಡಿದ್ದು ಅಲ್ಲಿಂದ ೨೫ ಕಿ.ಮೀ. ದೂರದಲ್ಲಿದೆ. ಅಲ್ಲಿ ಶಿವರಾತ್ರಿಯ ದಿನ ಭೈರವೇಶ್ವರ ಸ್ವಾಮಿಯ ಉತ್ಸವ ನಡೆಯುತ್ತದೆ. ಯಾಣದ ಬಗ್ಗೆ ಕೇಳುವುದಕ್ಕಿಂತ ನೋಡಿ ಅನುಭವಿಸುವುದೇ ಚಂದ. ನಮ್ಮನ್ನು ಯಾಣ ಪ್ರವಾಸಕ್ಕೆ ಕರೆದುಕೊಂಡು ಹೋಗುವಂತೆ ಪದ್ಮಿನಿ ಮೇಡಂ ಅವರಲ್ಲಿ ಕೇಳಿಕೊಳ್ಳೋಣ. ಅಲ್ಲವೇ? -ನಿನ್ನ ಗೆಳೆಯ ರಾಜು. ಮಕ್ಕಳು ಸಿದ್ಧಪಡಿಸಿದ ವಿಶೇಷ ಪತ್ರವನ್ನು ನೋಡಿ ಶಿಕ್ಷಕರಿಗೆ ಸಂತೋಷವಾಯಿತು. ಪದ್ಮಿನಿ ಟೀಚರ್ ಮಕ್ಕಳಿಗೆ ಶಹಬ್ಬಾಸ್ ಹೇಳಿದರು. ಹಾಗೂ ಇತರ ಮಕ್ಕಳಿಗೆ 'ಇ-ಮೇಲ್' ಪತ್ರದ ಬಗ್ಗೆ, ಅದರ ಆವಶ್ಯಕತೆಯ ಬಗ್ಗೆ ತಿಳಿಸಿದರು. ಯಾಣಕ್ಕೆ ಪ್ರವಾಸ ಹೋಗೋಣ ಎಂದರು. ಮಕ್ಕಳಿಗೆಲ್ಲ ಸಂತೋಷವಾಯಿತು.

"ದೇಶ ಸುತ್ತು ಅನುಭವ ಪಡೆ." — Travel the country and gain experience. (A reminder that real-world experience is the best teacher.)

ಪದಗಳ ಅರ್ಥword meanings

KannadaPronunciationMeaning
ಸಂದೇಶಸುದ್ದಿ; ವಿನಿಮಯ-ಒಂದಕ್ಕೆ ಬದಲಾಗಿ ಮತ್ತೊಂದನ್ನು ಕೊಡುವಿಕೆ; ಅದಲು ಬದಲು ಮಾಡಿಕೊಳ್ಳು
ಚೂಟಿಚುರುಕು; ಲವಲವಿಕೆ
ವಿಶೇಷಪ್ರತ್ಯೇಕವಾದ; ವಿಶಿಷ್ಟವಾದ
ಗಗನಚುಂಬಿಆಕಾಶವನ್ನು ಮುಟ್ಟುವಂತಹದು; ಬಹಳ ಎತ್ತರವಾದುದು
ಹೆಬ್ಬಂಡೆದೊಡ್ಡದಾದ ಕಲ್ಲು
ಇಕ್ಕಟ್ಟುಸಂದಿಗ್ಧ; ಕಿರಿದಾದ
ಶಿಖರಮರ, ಬೆಟ್ಟಗಳ ತುದಿ; ದೇವಾಲಯಗಳ ಗೋಪುರ
ಉತ್ಪತ್ತಿಸೃಷ್ಟಿ; ಉಂಟಾಗು; ಹುಟ್ಟು
ಭೂಗರ್ಭ ಶಾಸ್ತ್ರ :ಭೂಮಿಯ ಪದರಗಳ ಮತ್ತು ಭೂಮಿಯ ಒಳಗಿರುವ ವಸ್ತುಗಳ ವಿಷಯವನ್ನು ಅಧ್ಯಯನ ಮಾಡುವ ಶಾಸ್ತ್ರ
ಗುಪ್ತ ಸಂಕೇತ:'ಇ-ಮೇಲ್' ಬಳಸುವ ಪ್ರತಿಯೊಬ್ಬರಿಗೂ ಅವರದ್ದೇ ಆದ ಗುಪ್ತ ಸಂಕೇತವಿರುತ್ತದೆ
ಚಾರಣ :ಬೆಟ್ಟ ಗುಡ್ಡಗಳ ಕಡೆಗೆ ಸಾಹಸದ ನಡಿಗೆ
ದಂತಕಥೆಬಾಯಿಯಿಂದ ಬಾಯಿಗೆ ಹರಡುವ ಕಲ್ಪಿತ ಕಥೆ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಇಲ್ಲಿರುವ ಪದಗಳನ್ನು ಬಳಸಿ ಸೂಕ್ತವಾದುದನ್ನು ಬಿಟ್ಟ ಸ್ಥಳದಲ್ಲಿ ತುಂಬಿರಿ.

  1. (ಪದ್ಮಿನಿ, ರಾಗಿಣಿ ಮತ್ತು ಜೆನಿಫರ್, ಗುಪ್ತ, ರಾಜು, ದಂತ.)

  2. ೧. ಅದೊಂದು ಭಾನುವಾರ ಎಲ್ಲರೂ ________ ವಿನ ಮನೆಗೆ ಬಂದರು.

    Answer

    ರಾಜು

  3. ೨. 'ಇ ಮೇಲ್' ತೆರೆಯಲು ________ ಸಂಕೇತದ ಅಗತ್ಯವಿದೆ.

    Answer

    ಗುಪ್ತ

  4. ೩. ವಿಶೇಷ ಪತ್ರ ತಯಾರಿಸಲು ಹೇಳಿದ್ದು ________ ಮೇಡಂ.

    Answer

    ಪದ್ಮಿನಿ

  5. ೪. ಯಾಣದ ಕುರಿತಾಗಿ ಒಂದು ________ ಕಥೆಯಿದೆ.

    Answer

    ದಂತ

  6. ೫. ಯಾಣದ ಚಿತ್ರಗಳನ್ನು ಅದರ ವಿವರಗಳನ್ನು ________________ ಓದಿದರು.

    Answer

    ರಾಗಿಣಿ ಮತ್ತು ಜೆನಿಫರ್

ಆ. ಗುಂಪಿಗೆ ಸೇರದ ಪದ ಗುರುತಿಸಿ ಬರೆಯಿರಿ.

  1. ೧. ಕಾಗದ, ಪತ್ರ, ದೂರವಾಣಿ, ಓಲೆ.

  2. ೨. ಹೆಬ್ಬಂಡೆ, ಹಿರಿದು ಬಂಡೆ, ಕಿರಿದು ಬಂಡೆ, ದೊಡ್ಡ ಬಂಡೆ.

  3. ೩. ಸಂತೋಷ, ದುಃಖ, ಆನಂದ, ಸಂತಸ.

  4. ೪. ಸಂಪತ್ತು, ಆಪತ್ತು, ಧನ, ಐಶ್ವರ್ಯ.

ಇ. ಕೆಳಗಿನ ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿರಿ.

  1. ೧. ರಾಜುವಿನ ಮನೆಗೆ ಯಾರು ಯಾರು ಬಂದರು?

    Answer

    ರಾಜುವಿನ ಮನೆಗೆ ಸಲೀಂ, ರಾಗಿಣಿ, ಜೆನಿಫರ್ ಹಾಗೂ ಶಂಕರ ಬಂದರು.

  2. ೨. ಇ-ಅಂಚೆ ಎಂದರೇನು?

    Answer

    ಕಂಪ್ಯೂಟರ್ ಮೂಲಕ ಪತ್ರಗಳನ್ನು ಮತ್ತು ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುವ ಜನಪ್ರಿಯ ವಿಧಾನವೇ ಇ-ಅಂಚೆ.

  3. ೩. ಯಾಣದ ಯಾವ ಶಿಖರ ಉಕ್ಕಿನಕೋಟೆಯಂತಿದೆ?

    Answer

    ಭೈರವೇಶ್ವರ ಶಿಖರವು ಕಪ್ಪು ಕಲ್ಲಿನ ಉಕ್ಕಿನ ಕೋಟೆಯಂತಿದೆ.

  4. ೪. ಯಾಣದ ಕಲ್ಲು ಯಾವುದರಿಂದ ಉತ್ಪತ್ತಿಯಾಗಿದೆ?

    Answer

    ಭೂಗರ್ಭ ಶಾಸ್ತ್ರದ ಪ್ರಕಾರ ಯಾಣದ ಕಲ್ಲು ಅತಿ ಹೆಚ್ಚು ಖನಿಜ ಸಂಪತ್ತು ಮತ್ತು ಸುಣ್ಣದ ಕಲ್ಲಿನಿಂದ ಉತ್ಪತ್ತಿಯಾಗಿದೆ.

  5. ೫. ಯಾಣದಲ್ಲಿ ಯಾವ ದೇವರ ಉತ್ಸವ ನಡೆಯುತ್ತದೆ?

    Answer

    ಯಾಣದಲ್ಲಿ ಶಿವರಾತ್ರಿಯ ದಿನ ಭೈರವೇಶ್ವರ ಸ್ವಾಮಿಯ ಉತ್ಸವ ನಡೆಯುತ್ತದೆ.

ಈ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಸುಂದರ್ ಗುಪ್ತ ಸಂಕೇತವನ್ನು ರಾಜುವಿಗೆ ಮಾತ್ರ ಏಕೆ ಹೇಳಿದರು?

    Answer

    ಒಬ್ಬರ ಗುಪ್ತ ಸಂಕೇತ ಇನ್ನೊಬ್ಬರಿಗೆ ಗೊತ್ತಾಗಬಾರದು. ಗೊತ್ತಾದರೆ ಯಾರು ಬೇಕಾದರೂ ಪತ್ರ ಓದಬಹುದು; ಬೇರೆಯವರ ಪತ್ರವನ್ನು ನಾವು ಓದಬಾರದು. ಆದ್ದರಿಂದ ಸುಂದರ್ ಗುಪ್ತ ಸಂಕೇತವನ್ನು ರಾಜುವಿಗೆ ಮಾತ್ರ ಹೇಳಿದರು.

  2. ೨. ಯಾಣದ ಕುರಿತಾಗಿ ಇರುವ ಒಂದು ದಂತಕಥೆಯನ್ನು ಬರೆಯಿರಿ.

    Answer

    ಪುರಾಣ ಕಾಲದಲ್ಲಿ ಯಾಣದಲ್ಲಿ ಭಸ್ಮಾಸುರನೆಂಬ ರಾಕ್ಷಸ ವಾಸವಾಗಿದ್ದ. ಈತನ ಉಪಟಳವನ್ನು ಸಹಿಸಲು ಅಸಾಧ್ಯವಾದಾಗ ಶಿವನು ಆತನನ್ನು ಸುಟ್ಟು ಬೂದಿ ಮಾಡಿದ. ಈ ಬೂದಿಯಿಂದ ದೊಡ್ಡದಾದ ಶಿಖರ ಬೆಳೆಯಿತು ಎಂಬುದೇ ಆ ದಂತಕಥೆ.

  3. ೩. ಯಾವ ದೃಶ್ಯಗಳು ನೋಡುಗರನ್ನು ಚಕಿತಗೊಳಿಸುತ್ತವೆ?

    Answer

    ಯಾಣದ ಮೋಹಿನಿ ಶಿಖರ ಮತ್ತು ಕಪ್ಪು ಕಲ್ಲಿನ ಉಕ್ಕಿನ ಕೋಟೆಯಂತಿರುವ ಭೈರವೇಶ್ವರ ಶಿಖರದ ದೃಶ್ಯಗಳು ನೋಡುಗರನ್ನು ಚಕಿತಗೊಳಿಸುತ್ತವೆ. ಪ್ರಕೃತಿ ಮಾತೆಯೇ ಶಿಲ್ಪಿಯ ರೂಪ ತಾಳಿ ಈ ಆಕೃತಿಗಳನ್ನು ಕೆತ್ತಿದಳೇ ಎಂಬಷ್ಟರ ಮಟ್ಟಿಗೆ ಅವು ಅದ್ಭುತವಾಗಿವೆ.

ಉ. ಸಂಧಿ ಬಿಡಿಸಿ. ಸಂಧಿಯನ್ನು ಹೆಸರಿಸಿರಿ.

  1. ಭಸ್ಮಾಸುರ, ಭೈರವೇಶ್ವರ, ಏಕೈಕ, ಇತ್ಯಾದಿ, ಸೂರ್ಯೋದಯ

    Answer

    ಭಸ್ಮ + ಅಸುರ = ಭಸ್ಮಾಸುರ, ಸವರ್ಣದೀರ್ಘ ಸಂಧಿ

ಊ. ನಿಮ್ಮೂರಿನ ರಸ್ತೆಗೆ ಬೀದಿ ದೀಪವನ್ನು ಅಳವಡಿಸುವಂತೆ ಕೋರಿ ಸಂಬಂಧಿಸಿದ ಕಛೇರಿಗೆ ಒಂದು ಪತ್ರ ಬರೆಯಿರಿ.

Interactive Lab

ಸಂದೇಶಸುದ್ದಿ; ವಿನಿಮಯ-ಒಂದಕ್ಕೆ ಬದಲಾಗಿ ಮತ್ತೊಂದನ್ನು ಕೊಡುವಿಕೆ; ಅದಲು ಬದಲು ಮಾಡಿಕೊಳ್ಳು
ಚೂಟಿಚುರುಕು; ಲವಲವಿಕೆ
ವಿಶೇಷಪ್ರತ್ಯೇಕವಾದ; ವಿಶಿಷ್ಟವಾದ
ಗಗನಚುಂಬಿಆಕಾಶವನ್ನು ಮುಟ್ಟುವಂತಹದು; ಬಹಳ ಎತ್ತರವಾದುದು
ಹೆಬ್ಬಂಡೆದೊಡ್ಡದಾದ ಕಲ್ಲು
ಇಕ್ಕಟ್ಟುಸಂದಿಗ್ಧ; ಕಿರಿದಾದ
ಶಿಖರಮರ, ಬೆಟ್ಟಗಳ ತುದಿ; ದೇವಾಲಯಗಳ ಗೋಪುರ
ಉತ್ಪತ್ತಿಸೃಷ್ಟಿ; ಉಂಟಾಗು; ಹುಟ್ಟು
ಭೂಗರ್ಭ ಶಾಸ್ತ್ರ :ಭೂಮಿಯ ಪದರಗಳ ಮತ್ತು ಭೂಮಿಯ ಒಳಗಿರುವ ವಸ್ತುಗಳ ವಿಷಯವನ್ನು ಅಧ್ಯಯನ ಮಾಡುವ ಶಾಸ್ತ್ರ
ಗುಪ್ತ ಸಂಕೇತ:'ಇ-ಮೇಲ್' ಬಳಸುವ ಪ್ರತಿಯೊಬ್ಬರಿಗೂ ಅವರದ್ದೇ ಆದ ಗುಪ್ತ ಸಂಕೇತವಿರುತ್ತದೆ
ಚಾರಣ :ಬೆಟ್ಟ ಗುಡ್ಡಗಳ ಕಡೆಗೆ ಸಾಹಸದ ನಡಿಗೆ
ದಂತಕಥೆಬಾಯಿಯಿಂದ ಬಾಯಿಗೆ ಹರಡುವ ಕಲ್ಪಿತ ಕಥೆ