CRECT Education

Class 7 Kannada Lesson 16: The Final Farewell | KTBS Second Language – Learn the Story

Description

A doctor's hidden grief, a father's panic, and a nurse's revelation — learn the powerful Kannada words behind the emotions.

ಗದ್ಯ (prose) · ಗಿರೀಶ್ ತಾಳಿಕಟ್ಟೆ

ಪಠ್ಯFull text

ಆ ವೈದ್ಯನ ನಡಿಗೆಯಲ್ಲಿ ಧಾವಂತವಿತ್ತು. ರೋಗಿಯೊಬ್ಬನನ್ನು ಉಳಿಸಲು ತನ್ನಿಂದಾಗಿ ತಡವಾಗುತ್ತಿದೆಯಲ್ಲಾ ಎಂಬ ತಳಮಳವಿತ್ತು. ನರ್ಸ್ ಅವರಿಂದ ಫೋನ್ ಬರುತ್ತಿದ್ದಂತೆಯೇ ಆಸ್ಪತ್ರೆಗೆ ದೌಡಾಯಿಸಿದ್ದ. ತನ್ನ ರೂಮಿಗೆ ಹೋದವನೇ ಶಸ್ತ್ರಚಿಕಿತ್ಸೆಯ ಸಮವಸ್ತ್ರ ಧರಿಸಿ ಆಪರೇಷನ್ ಥಿಯೇಟರಿನತ್ತ ಹೆಜ್ಜೆ ಹಾಕಿದ್ದ. ಕೊಠಡಿಯ ಮುಂದೆ ಒಬ್ಬ ತಂದೆ ಶತಪಥ ಹೆಜ್ಜೆ ಹಾಕುತ್ತಿದ್ದಾನೆ. ಒಳಗೆ ಮಲಗಿರುವ ತನ್ನ ಮಗನಿಗೆ ಏನಾಗಿ ಬಿಡುತ್ತೋ, ಮತ್ತೆ ಆತನನ್ನು ಜೀವಂತವಾಗಿ ನೋಡುತ್ತೇನೋ ಇಲ್ಲವೋ ಎಂಬ ಆತಂಕ ಅವನನ್ನು ಕಿತ್ತು ತಿನ್ನುತ್ತಿದೆ. ಮುಖದಲ್ಲಿ ಅಸಹನೆ ತಾಂಡವವಾಡುತ್ತಿದೆ. ಆಪರೇಷನ್ ಥಿಯೇಟರಿನತ್ತ ದೌಡಾಯಿಸುತ್ತಿರುವ ವೈದ್ಯನನ್ನು ಕಾಣುತ್ತಿದ್ದಂತೆಯೇ ಅವನಲ್ಲಾ ಅಸಹನೆಯ ಕಟ್ಟೆಯೊಡೆಯಿತು. “ಇಲ್ಲಿಗೆ ಬರುವುದಕ್ಕೆ ನಿಮಗೆ ಇಷ್ಟೊತ್ತು ಬೇಕಾಯಿತೆ? ನನ್ನ ಮಗನ ಜೀವ ಅಪಾಯದಲ್ಲಿದೆಯೆಂಬುದು ನಿಮಗೆ ಗೊತ್ತಿಲ್ಲವೇ? ನಿಮಗೆ ಕಿಂಚಿತ್ತಾದರೂ ಜವಾಬ್ದಾರಿ ಎನ್ನುವುದಿಲ್ಲವೇ?” ತನ್ನೆಲ್ಲಾ ಆಕ್ರೋಶಕ್ಕೆ ಮಾತಿನ ರೂಪ ಕೊಟ್ಟು ವೈದ್ಯನ ಮೇಲೆ ಹರಿಹಾಯ್ದ. “ದಯವಿಟ್ಟು ಕ್ಷಮಿಸಪ್ಪ. ನಾನು ಆಸ್ಪತ್ರೆಯಲ್ಲಿ ಇರಲಿಲ್ಲ. ನನಗೆ ಫೋನ್ ಬರುತ್ತಿದ್ದಂತೆಯೇ ಹೊರಟು ಬಂದಿದ್ದೇನೆ. ದಯಮಾಡಿ ನೀನೀಗ ಸ್ವಲ್ಪ ಶಾಂತನಾಗು. ನನ್ನ ಕೆಲಸ ಮಾಡಲು ಅನುವು ಮಾಡಿಕೊಡು. ಈಗಾಗಲೇ ತಡವಾಗಿ ಹೋಗಿದೆ” ಕ್ಷಮೆಯ ನಗುವಿನೊಂದಿಗೆ ವೈದ್ಯ ವಿನಂತಿಸಿಕೊಂಡ. “ಶಾಂತನಾಗೋದ? ಒಂದೊಮ್ಮೆ ನಿನ್ನ ಮಗ ಇದೇ ಆಪರೇಷನ್ ಕೊಠಡಿಯಲ್ಲಿ ಈ ಪರಿಸ್ಥಿತಿಯಲ್ಲಿ ಮಲಗಿದ್ದರೆ ನೀನು ಶಾಂತನಾಗಿರುತ್ತಿದ್ದೆಯಾ? ವೈದ್ಯ ಬರುವುದು ತಡವಾಗಿ ನಿನ್ನ ಮಗ ಸತ್ತು ಹೋದರೆ ನೀನೇನು ಮಾಡುತ್ತಿದ್ದೆ?” ತಂದೆಯ ಆಕ್ರೋಶಕ್ಕೆ ಕೊನೆಯಿದ್ದಂತೆ ಕಾಣಲಿಲ್ಲ. ವೈದ್ಯ ಮತ್ತದೇ ಕ್ಷಮೆಯಾಚಿತ ನಗುವಿನೊಂದಿಗೆ ಉತ್ತರಿಸಿದ “ಒಬ್ಬ ವೈದ್ಯನಾಗಿ ನಾನು ಏನು ಮಾಡಬಲ್ಲೆನೋ ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ನಿನ್ನ ಮಗನನ್ನು ಉಳಿಸಲು ನನ್ನೆಲ್ಲಾ ಸಾಮರ್ಥ್ಯವನ್ನು ಪಣಕ್ಕಿಡುತ್ತೇನೆ. ಆದರೂ ನಮ್ಮನ್ನೆಲ್ಲಾ ಮೀರಿದ ಶಕ್ತಿಯ ಮುಂದೆ ನಮ್ಮ ಆಟವೇನೂ ನಡೆಯದು. ವೈದ್ಯರಾದವರು ಸಾವನ್ನು ಮುಂದೂಡಬಹುದೇ ವಿನಾ ಸಾವಿನಿಂದ ಸಂಪೂರ್ಣವಾಗಿ ಬಚಾವು ಮಾಡುವ ಶಕ್ತಿ ನಮಗೂ ಇಲ್ಲ. ಈಗ ಹೋಗಿ ಆ ದೇವರ ಬಳಿ ನಿನ್ನ (Illustration of a doctor in a lab coat and a man in a yellow kurta arguing outside a hospital room, with a patient visible inside the room through a window) ಮಗನನ್ನು ಉಳಿಸಿಕೊಡುವಂತೆ ಬೇಡಿಕೋ. ನನಗೆ ನನ್ನ ಕೆಲಸ ಮಾಡಲು ಬಿಡು.” “ನಾವು ಆ ಕಷ್ಟದ ಭಾಗವಾಗದೇ ಇದ್ದಾಗ, ಅದಕ್ಕೆ ಸಾಂತ್ವನ ಹೇಳೋದು ತುಂಬಾ ಸುಲಭ. ನಾವೇ ಆ ಕಷ್ಟಕ್ಕೆ ಸಿಲುಕಿದಾಗ ಅದರ ಭಾರ ಅರ್ಥವಾಗೋದು” ತಂದೆಯ ಗೊಣಗಾಟ ಮುಂದುವರೆದೇ ಇತ್ತು. ಅದನ್ನು ಲೆಕ್ಕಿಸದ ವೈದ್ಯ ಶಸ್ತ್ರಚಿಕಿತ್ಸಾ ಕೊಠಡಿಯೊಳಗೆ ನುಗ್ಗಿದ. ಬಾಗಿಲು ಮುಚ್ಚಿಕೊಂಡಿತು. ಕೆಂಪುದೀಪ ಉರಿಯಲು ಮೊದಲೊಂಡಿತು. ಶಸ್ತ್ರಚಿಕಿತ್ಸೆ ಮುಗಿಯುವುದಕ್ಕೆ ಹಲವು ಗಂಟೆಗಳೇ ತಗುಲಿತು. ಕೊನೆಗೆ ಮುಚ್ಚಿದ ಬಾಗಿಲನ್ನು ತಳ್ಳಿಕೊಂಡು ವೈದ್ಯ ಹೊರಬಂದ. ಅವನ ಮುಖದ ಮೇಲೆ ಮತ್ತದೇ ಅವಸರವಿತ್ತು. “ನೋಡಿದ್ಯಾ, ನಾನೇಳಲಿಲ್ಲವೇ. ಆ ಕಾಣದ ಶಕ್ತಿ ನಿನ್ನ ಕೈಬಿಡಲಿಲ್ಲ. ಆಪರೇಷನ್ ಯಶಸ್ವಿಯಾಗಿ ಮುಗಿದಿದೆ. ಈಗ ನಿನ್ನ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ” ಅದೇನನ್ನೋ ಹೇಳಬರುತ್ತಿದ್ದ ತಂದೆಯನ್ನು ತಡೆದು ವೈದ್ಯ ತನ್ನ ಮಾತು ಮುಂದುವರೆಸಿದ. “ನೋಡು, ಮತ್ತೇನಾದರು ಕೇಳುವುದಿದ್ದರೆ ಸಿಸ್ಟರ್ ಬರುತ್ತಾರೆ. ಅವರನ್ನೇ ಕೇಳು!!” ಎಂದವರೇ ಬಂದಷ್ಟೇ ಧಾವಂತದಲ್ಲಿ ಅಲ್ಲಿಂದ ಖಾಲಿಯಾದರು. ಆ ತಂದೆಗೆ ವಿಪರೀತ ಬೇಸರವಾಯಿತು. ಹಿಂದೆಯೇ ನರ್ಸ್ ಬಂದು ನಿಂತದ್ದನ್ನು ಕಂಡು, “ಇವನೇಕೆ ಇಷ್ಟು ತಾಳ್ಮೆಗೆಟ್ಟವನಂತೆ ವರ್ತಿಸುತ್ತಿದ್ದಾನೆ. ನನ್ನ ಮಗನ ಸ್ಥಿತಿಗತಿ ಬಗ್ಗೆ ಕೊಂಚ ತಿಳಿದುಕೊಳ್ಳೋಣ ಎಂದರೆ ಅದಕ್ಕೂ ಪುರುಸೊತ್ತಿಲ್ಲದಂತೆ ಓಡುತ್ತಿದ್ದಾನಲ್ಲಾ? ಹಣದ ಹಿಂದೆ ಬಿದ್ದವರ ಧಾವಂತವೇ ಇಂತದ್ದು. ಇವರಿಗೆ ರೋಗಿಗಳ ಜೀವಕ್ಕಿಂತ ದುಡ್ಡೇ ದೊಡ್ಡದು. ಥೇ!” ಎಂದು ಮೂದಲಿಸಿದ. ನರ್ಸ್ ಮೌನವಾಗೇ ನಿಂತಿದ್ದಳು. ಅವಳ ಕಣ್ಣಿಂದ ನೀರು ಜಾರಿ ಕೆನ್ನೆಯ ಮೇಲೆ ಹರಿಯುತ್ತಿದ್ದವು. ಭಾರವಾದ ದನಿಯೊಂದು ಅವಳಿಂದ ಹೊರಬಿತ್ತು. “ಅವರ ಮಗ ನಿನ್ನೆಯಷ್ಟೇ ನಡೆದ ಆಕ್ಸಿಡೆಂಟ್‌ನಲ್ಲಿ ಸತ್ತು ಹೋದ, ಪಾಪ! ನಾವು ಅವರಿಗೆ ಫೋನ್ ಮಾಡಿದಾಗ ತಮ್ಮ ಮಗನ ಅಂತ್ಯಕ್ರಿಯೆಯ ದುಃಖದ ಮಡುವಿನಲ್ಲಿದ್ದರು. ನಿನ್ನ ಮಗನ ಆಪರೇಷನ್ ತುರ್ತನ್ನು ಹೇಳುತ್ತಿದ್ದಂತೆಯೇ ಆ ಕೆಲಸವನ್ನು ಅರ್ಧಕ್ಕೆ ಬಿಟ್ಟು ಬಂದಿದ್ದರು. ನಿನ್ನ ಮಗನ ಜೀವ ಉಳಿಸಿದರು. ಈಗವರು ತಮ್ಮ ಮಗನ ಅಂತಿಮ ವಿದಾಯಕ್ಕೆ ಹೋಗುತ್ತಿದ್ದಾರೆ!!” ಆ ತಂದೆಯ ಗಂಟಲು ಹಿಂಗಿಹೋಗಿತ್ತು. ತನ್ನ ಮಗನನ್ನು ನೋಡುವುದಕ್ಕೂ ಚೈತನ್ಯವಿಲ್ಲದೇ ಕುರ್ಚಿಯಲ್ಲಿ ಕುಸಿದು ಕುಳಿತ. **ಕೃತಿಕಾರರ ಪರಿಚಯ :** (Portrait of ಗಿರೀಶ್ ತಾಳಿಕಟ್ಟೆ is shown) ಗಿರೀಶ್ ತಾಳಿಕಟ್ಟೆ ಇವರು ಚಿತ್ರದುರ್ಗ ಜಿಲ್ಲೆಯ ತಾಳಿಕಟ್ಟೆಯಲ್ಲಿ ೧೯೮೪ ರಲ್ಲಿ ಜನಿಸಿದರು. ದಂತ ವೈದ್ಯಕೀಯ ಪದವೀಧರರಾದ ಇವರು 'ಹಲ್ಲು ಮತ್ತು ವಸಡು; ಕಾರಣ ಪರಿಹಾರ', 'ವೈದ್ಯ ಪದಗಳ ಅರ್ಥ ವಿವರಣಾ ಕೋಶ', 'ಮೆಂಟಲ್ ಹೆಲ್ತ್ ಟಿಪ್ಸ್' ಮುಂತಾದ ಆರೋಗ್ಯ ವಿಜ್ಞಾನಕ್ಕೆ ಸಂಬಂಧಿಸಿದ ಕೃತಿಗಳನ್ನೂ 'ಟರ್ನಿಂಗ್ ಪಾಯಿಂಟ್', 'ವಿಚಾರ ವಿನಿಮಯ', 'ಎಸ್.ಎಸ್.ಎಲ್.ಸಿ. ನಂತರ ಮುಂದೇನು?' ಮುಂತಾದ ವ್ಯಕ್ತಿತ್ವ ವಿಕಸನ ಮತ್ತು ವೃತ್ತಿ ಮಾರ್ಗದರ್ಶನ ಕೃತಿಗಳನ್ನೂ 'ಜೆನ್ ಕಥೆಗಳು', 'ಕಾಡುವ ಕಥೆಗಳು' ಎಂಬ ಕಥಾಸಂಕಲನಗಳನ್ನೂ ಬರೆದಿದ್ದಾರೆ. ಪ್ರಸ್ತುತ 'ಅಂತಿಮ ವಿದಾಯ' ಗದ್ಯ ಭಾಗವನ್ನು ಅವರ 'ಕಾಡುವ ಕಥೆಗಳು' ಕೃತಿಯಿಂದ ಆಯ್ದುಕೊಳ್ಳಲಾಗಿದೆ.

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ ತಿಳಿಯಿರಿ :

  1. ಅಂತ್ಯಕ್ರಿಯೆ - ಉತ್ತರ ಕ್ರಿಯೆ

  2. ಗೊಣಗಾಟ - ಆಕ್ಷೇಪಿತ ಅಸ್ಪಷ್ಟ ಮಾತು.

  3. ದೌಡಾಯಿಸು - ಓಡುವುದು; ಅವಸರ.

  4. ಪಣಕ್ಕಿಡು - ಪ್ರತಿಜ್ಞೆ.

  5. ಪುರುಸೊತ್ತು - ಬಿಡುವು; ವಿರಾಮ.

  6. ಮಡು - ಆಳ; ಗುಂಡಿ.

  7. ವಿದಾಯ - ಬೀಳ್ಕೊಡು

  8. ಸಾಂತ್ವನ - ಸಮಾಧಾನ; ಸಂತೈಸು.

  9. ಅನುವು - ಅವಕಾಶ

  10. ತುರ್ತು - ಜರೂರು; ಬೇಗನೇ; ಈ ಕ್ಷಣ.

  11. ಧಾವಂತ - ಆತುರ

  12. ಪಾರಾಗು - ಬಿಡುಗಡೆಯಾಗು

  13. ಬಚಾವು - ಕಾಪಾಡು; ರಕ್ಷಿಸು.

  14. ಮೂದಲಿಸು - ಹೀಯಾಳಿಸು

  15. ಶತಪಥ - ಅತ್ತಿಂದಿತ್ತ ನಡೆದಾಡುವುದು

  16. ಹರಿಹಾಯಿ - ಕೋಪಗೊಳ್ಳು; ರೇಗುವುದು.

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ವೈದ್ಯನ ನಡಿಗೆಯಲ್ಲಿ ಧಾವಂತವಿತ್ತು ಏಕೆ?

    Answer

    ಒಬ್ಬ ರೋಗಿಯನ್ನು ಉಳಿಸಲು ತನ್ನಿಂದಾಗಿ ತಡವಾಗುತ್ತಿದೆಯಲ್ಲಾ ಎಂಬ ತಳಮಳದಿಂದ ವೈದ್ಯನ ನಡಿಗೆಯಲ್ಲಿ ಧಾವಂತವಿತ್ತು.

  2. ೨. ಆಪರೇಷನ್ ಕೊಠಡಿಯ ಬಳಿ ಇದ್ದ ತಂದೆಯ ಮುಖದಲ್ಲಿ ಯಾವ ಆತಂಕವಿತ್ತು?

    Answer

    ಆಪರೇಷನ್ ಕೊಠಡಿಯ ಬಳಿ ಇದ್ದ ತಂದೆಯ ಮುಖದಲ್ಲಿ ತನ್ನ ಮಗನಿಗೆ ಏನಾಗಿ ಬಿಡುತ್ತೋ, ಮತ್ತೆ ಆತನನ್ನು ಜೀವಂತವಾಗಿ ನೋಡುತ್ತೇನೋ ಇಲ್ಲವೋ ಎಂಬ ಆತಂಕವಿತ್ತು.

  3. ೩. ಸಾವಿನ ಬಗ್ಗೆ ವೈದ್ಯರು ಏನೆಂದು ಹೇಳಿದರು?

    Answer

    ಸಾವಿನ ಬಗ್ಗೆ ವೈದ್ಯರು, ವೈದ್ಯರಾದವರು ಸಾವನ್ನು ಮುಂದೂಡಬಹುದೇ ವಿನಾ ಸಾವಿನಿಂದ ಸಂಪೂರ್ಣವಾಗಿ ಬಚಾವು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

  4. ೪. ವ್ಯಕ್ತಿಗೆ ಕಷ್ಟದ ಭಾರ ಅರ್ಥವಾಗುವುದು ಯಾವಾಗ?

    Answer

    ತಾವೇ ಆ ಕಷ್ಟಕ್ಕೆ ಸಿಲುಕಿದಾಗ ವ್ಯಕ್ತಿಗೆ ಕಷ್ಟದ ಭಾರ ಅರ್ಥವಾಗುತ್ತದೆ.

  5. ೫. ವೈದ್ಯರು ಆಪರೇಷನ್ ಮುಗಿಸಿ ಅವಸರದಿಂದ ಮನೆಗೆ ತೆರಳಿದ್ದು ಏಕೆ?

    Answer

    ವೈದ್ಯರು ತಮ್ಮ ಮಗನ ಅಂತಿಮ ವಿದಾಯಕ್ಕೆ ಹೋಗಲು ಆಪರೇಷನ್ ಮುಗಿಸಿ ಅವಸರದಿಂದ ಮನೆಗೆ ತೆರಳಿದರು.

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಆಪರೇಷನ್ ಥಿಯೇಟರಿನತ್ತ ದೌಡಾಯಿಸಿದ ವೈದ್ಯನ ಮೇಲೆ ರೋಗಿಯ ತಂದೆ ಏನೆಂದು ಹರಿಹಾಯ್ದನು?

    Answer

    ಆಪರೇಷನ್ ಥಿಯೇಟರಿನತ್ತ ದೌಡಾಯಿಸಿದ ವೈದ್ಯನ ಮೇಲೆ ರೋಗಿಯ ತಂದೆ, 'ಇಲ್ಲಿಗೆ ಬರುವುದಕ್ಕೆ ನಿಮಗೆ ಇಷ್ಟೊತ್ತು ಬೇಕಾಯಿತೆ? ನನ್ನ ಮಗನ ಜೀವ ಅಪಾಯದಲ್ಲಿದೆಯೆಂಬುದು ನಿಮಗೆ ಗೊತ್ತಿಲ್ಲವೇ? ನಿಮಗೆ ಕಿಂಚಿತ್ತಾದರೂ ಜವಾಬ್ದಾರಿ ಎನ್ನುವುದಿಲ್ಲವೇ?' ಎಂದು ಹರಿಹಾಯ್ದನು.

  2. ೨. ವೈದ್ಯರು ಆಕ್ರೋಶದಲ್ಲಿದ್ದ ರೋಗಿಯ ತಂದೆಯನ್ನು ಏನೆಂದು ವಿನಂತಿಸಿಕೊಂಡರು?

    Answer

    ವೈದ್ಯರು ಆಕ್ರೋಶದಲ್ಲಿದ್ದ ರೋಗಿಯ ತಂದೆಯನ್ನು, ತಾವು ಆಸ್ಪತ್ರೆಯಲ್ಲಿಲ್ಲದಿದ್ದಾಗ ಫೋನ್ ಬರುತ್ತಿದ್ದಂತೆಯೇ ಹೊರಟು ಬಂದಿದ್ದಾಗಿ ಕ್ಷಮೆ ಕೇಳಿ ಸ್ವಲ್ಪ ಶಾಂತನಾಗಿ ತಮ್ಮ ಕೆಲಸ ಮಾಡಲು ಅನುವು ಮಾಡಿಕೊಡುವಂತೆ ವಿನಂತಿಸಿಕೊಂಡರು.

  3. ೩. ವೈದ್ಯರು ರೋಗಿಯ ತಂದೆಗೆ ಏನೆಂದು ಭರವಸೆ ನೀಡಿದರು?

    Answer

    ವೈದ್ಯರು ರೋಗಿಯ ತಂದೆಗೆ, ಒಬ್ಬ ವೈದ್ಯನಾಗಿ ತಾನು ಪ್ರಾಮಾಣಿಕವಾಗಿ ಮಾಡಬಲ್ಲ ಪ್ರಯತ್ನ ಮಾಡಿ ತನ್ನೆಲ್ಲಾ ಸಾಮರ್ಥ್ಯವನ್ನು ಪಣಕ್ಕಿಡುತ್ತೇನೆ ಎಂದು ಭರವಸೆ ನೀಡಿದರು.

  4. ೪. ಆಪರೇಷನ್ ಮುಗಿಸಿ ಹೊರನಡೆದ ವೈದ್ಯರನ್ನು ರೋಗಿಯ ತಂದೆ ಏನೆಂದು ಮೂದಲಿಸಿದನು?

    Answer

    ಆಪರೇಷನ್ ಮುಗಿಸಿ ಹೊರನಡೆದ ವೈದ್ಯರನ್ನು ರೋಗಿಯ ತಂದೆ, ಹಣದ ಹಿಂದೆ ಬಿದ್ದವರ ಧಾವಂತವಿರುತ್ತದೆ ಮತ್ತು ಇವರಿಗೆ ರೋಗಿಗಳ ಜೀವಕ್ಕಿಂತ ದುಡ್ಡೇ ದೊಡ್ಡದು ಎಂದು ಮೂದಲಿಸಿದನು.

  5. ೫. ನರ್ಸ್ ರೋಗಿಯ ತಂದೆಗೆ ಏನು ಹೇಳಿದಳು?

    Answer

    ನರ್ಸ್ ರೋಗಿಯ ತಂದೆಗೆ, ವೈದ್ಯರ ಮಗ ನಿನ್ನೆಯಷ್ಟೇ ಆಕ್ಸಿಡೆಂಟ್‌ನಲ್ಲಿ ಸತ್ತುಹೋದನೆಂದೂ ಅವರು ತಮ್ಮ ಮಗನ ಅಂತ್ಯಕ್ರಿಯೆಯ ದುಃಖದಲ್ಲಿದ್ದರೂ ಅದನ್ನು ಅರ್ಧಕ್ಕೆ ಬಿಟ್ಟು ಬಂದು ಆಪರೇಷನ್ ಮಾಡಿದರೆಂದೂ ಈಗ ಅವರು ತಮ್ಮ ಮಗನ ಅಂತಿಮ ವಿದಾಯಕ್ಕೆ ಹೋಗುತ್ತಿದ್ದಾರೆಂದೂ ಹೇಳಿದಳು.

ಇ) ಕೆಳಗಿನ ಪ್ರಶ್ನೆಗಳಿಗೆ ಏಳು-ಎಂಟು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ವೈದ್ಯ ಹಾಗೂ ರೋಗಿಯ ತಂದೆಯ ನಡುವೆ ಯಾವ ಮಾತುಕತೆಗಳು ನಡೆದವು?

    Answer

    ವೈದ್ಯ ಹಾಗೂ ರೋಗಿಯ ತಂದೆಯ ನಡುವೆ ನಡೆದ ಮಾತುಕತೆ ಹೀಗಿತ್ತು: ರೋಗಿಯ ತಂದೆ ವೈದ್ಯರಿಗೆ 'ಇಷ್ಟೊತ್ತು ಬೇಕಾಯಿತೆ? ಜವಾಬ್ದಾರಿ ಇಲ್ಲವೇ?' ಎಂದು ಆಕ್ರೋಶ ವ್ಯಕ್ತಪಡಿಸಿದನು. ವೈದ್ಯರು 'ಕ್ಷಮಿಸಿ, ಫೋನ್ ಬರುತ್ತಿದ್ದಂತೆ ಹೊರಟು ಬಂದಿದ್ದೇನೆ, ಸ್ವಲ್ಪ ಶಾಂತರಾಗಿ' ಎಂದರು. ತಂದೆ 'ನಿನ್ನ ಮಗ ಇಲ್ಲಿ ಮಲಗಿದ್ದರೆ ನೀನು ಶಾಂತನಾಗಿರುತ್ತಿದ್ದೆಯಾ?' ಎಂದು ಮತ್ತೂ ಕೇಳಿದನು. ವೈದ್ಯರು 'ನನ್ನ ಸಾಮರ್ಥ್ಯವನ್ನೆಲ್ಲಾ ಪಣಕ್ಕಿಡುತ್ತೇನೆ, ದೇವರಲ್ಲಿ ಬೇಡಿಕೋ' ಎಂದು ಹೇಳಿದರು. ಅದಕ್ಕೆ ತಂದೆ 'ನಾವು ಕಷ್ಟದ ಭಾಗವಾಗದಿದ್ದಾಗ ಸಾಂತ್ವನ ಹೇಳುವುದು ಸುಲಭ' ಎಂದು ಗೊಣಗಿದನು. ನಂತರ ವೈದ್ಯರು ಆಪರೇಷನ್ ಮುಗಿಸಿ ಬಂದು 'ಯಶಸ್ವಿಯಾಗಿ ಮುಗಿದಿದೆ, ಮಗ ಪಾರಾಗಿದ್ದಾನೆ' ಎಂದರು. ಕೊನೆಯಲ್ಲಿ ತಂದೆಯು ಆ ವೈದ್ಯರನ್ನು ಹಣದ ಹಿಂದೆ ಬಿದ್ದವರೆಂದು ಮೂದಲಿಸಿದನು.

  2. ೨. ವೈದ್ಯರ ಯಾವ ಗುಣಗಳು ನಿಮಗೆ ಮೆಚ್ಚುಗೆಯಾದವು? ಏಕೆ?

    Answer

    ವೈದ್ಯರ ಕರ್ತವ್ಯನಿಷ್ಠೆ ಮತ್ತು ತ್ಯಾಗದ ಗುಣಗಳು ನನಗೆ ಮೆಚ್ಚುಗೆಯಾದವು. ಏಕೆಂದರೆ, ತಮ್ಮ ಸ್ವಂತ ಮಗನ ಆಕಸ್ಮಿಕ ಸಾವಿನ ದುಃಖದಲ್ಲಿದ್ದೂ ಫೋನ್ ಬರುತ್ತಿದ್ದಂತೆಯೇ ಆಸ್ಪತ್ರೆಗೆ ದೌಡಾಯಿಸಿ ಬಂದು ರೋಗಿಯ ಮಗನನ್ನು ಉಳಿಸಿದರು. ತಂದೆಯ ಆಕ್ರೋಶವನ್ನು ಸಹಿಸಿಕೊಂಡು ತನ್ನ ಕರ್ತವ್ಯವನ್ನೇ ಮುಖ್ಯವೆಂದು ಭಾವಿಸಿ ಶಸ್ತ್ರಚಿಕಿತ್ಸೆ ಮಾಡಿದ ಅವರ ನಿಸ್ವಾರ್ಥ ಸೇವಾ ಮನೋಭಾವ ನಿಜಕ್ಕೂ ಶ್ಲಾಘನೀಯ.

ಈ) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ವಿವರಿಸಿ.

  1. ೧. ಇಲ್ಲಿಗೆ ಬರುವುದಕ್ಕೆ ನಿಮಗೆ ಇಷ್ಟೊತ್ತು ಬೇಕಾಯಿತೇ?

    Answer

    ಈ ಮಾತನ್ನು ರೋಗಿಯ ತಂದೆ ವೈದ್ಯರಿಗೆ ಹೇಳಿದನು.

  2. ೨. ಹಣದ ಹಿಂದೆ ಬಿದ್ದವರ ಧಾವಂತವೇ ಇಂತಹದ್ದು.

    Answer

    ಈ ಮಾತನ್ನು ರೋಗಿಯ ತಂದೆ ನರ್ಸ್ ಬಳಿ ವೈದ್ಯರ ಬಗ್ಗೆ ಮೂದಲಿಸಿ ಹೇಳಿದನು.

  3. ೩. ಈಗವರು ತಮ್ಮ ಮಗನ ಅಂತಿಮ ವಿದಾಯಕ್ಕೆ ಹೋಗುತ್ತಿದ್ದಾರೆ.

    Answer

    ಈ ಮಾತನ್ನು ನರ್ಸ್ ರೋಗಿಯ ತಂದೆಗೆ ವೈದ್ಯರ ಬಗ್ಗೆ ಹೇಳಿದಳು.

III. ಭಾಷಾಭ್ಯಾಸ :

ಅ) ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.

  1. ೧. ಧಾವಂತ : __________________________________________________________________

    Model sentence

    ಧಾವಂತ: ಬೆಳಿಗ್ಗೆ ಸ್ಕೂಲಿಗೆ ತಡವಾಗುವ ಧಾವಂತದಲ್ಲಿ ನಾನು ಊಟದ ಡಬ್ಬಿಯನ್ನೇ ಮರೆತುಬಿಟ್ಟೆ.

  2. ೨. ಸಾಂತ್ವನ : __________________________________________________________________

    Model sentence

    ಸಾಂತ್ವನ: ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಗೆಳೆಯನಿಗೆ ನಾನು ಸಾಂತ್ವನ ಹೇಳಿದೆ.

  3. ೩. ಪಾರಾಗು : __________________________________________________________________

    Model sentence

    ಪಾರಾಗು: ಮಳೆಯಲ್ಲಿ ಮರದಡಿ ನಿಂತ ನಾಯಿಮರಿಯು ಸಿಡಿಲಿನ ಅಪಾಯದಿಂದ ಪಾರಾಯಿತು.

  4. ೪. ಮೂದಲಿಸು : __________________________________________________________________

    Model sentence

    ಮೂದಲಿಸು: ಸಣ್ಣ ತಪ್ಪಿಗೆ ಅಣ್ಣ ನನ್ನನ್ನು ಮೂದಲಿಸಿದಾಗ ನನಗೆ ಬೇಸರವಾಯಿತು.

  5. ೫. ಆಕ್ರೋಶ : __________________________________________________________________

    Model sentence

    ಆಕ್ರೋಶ: ಆಟ ಸೋತ ತಕ್ಷಣ ಗೆಳೆಯನ ಮೇಲೆ ಆಕ್ರೋಶ ಮಾಡುವುದು ತಪ್ಪು.

  6. ೬. ವಿದಾಯ : __________________________________________________________________

    Model sentence

    ವಿದಾಯ: ರಜೆ ಮುಗಿದು ಅಜ್ಜಿ ಮನೆಯಿಂದ ಹೊರಡುವಾಗ ವಿದಾಯ ಹೇಳಲು ದುಃಖವಾಯಿತು.

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

  1. ೧. ರೋಗಿ X ___________

    Answer

    ರೋಗಿ X ವೈದ್ಯ

  2. ೨. ಶಕ್ತಿ X ___________

    Answer

    ಶಕ್ತಿ X ಅಶಕ್ತಿ

  3. ೩. ಸಾವು X ___________

    Answer

    ಸಾವು X ಹುಟ್ಟು

  4. ೪. ಅಸಹನೆ X ___________

    Answer

    ಅಸಹನೆ X ಸಹನೆ

  5. ೫. ದುಃಖ X ___________

    Answer

    ದುಃಖ X ಸುಖ

  6. ೬. ಶಾಂತ X ___________

    Answer

    ಶಾಂತ X ಅಶಾಂತ

  7. ೭. ಅಂತಿಮ X ___________

    Answer

    ಅಂತಿಮ X ಆದಿ

  8. ೮. ಪ್ರಾಮಾಣಿಕ X ___________

    Answer

    ಪ್ರಾಮಾಣಿಕ X ಅಪ್ರಾಮಾಣಿಕ

ಇ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.

  1. ೧. ತಾಳ್ಮೆಗೆಟ್ಟ = _______________ + _______________

    Answer

    ತಾಳ್ಮೆಗೆಟ್ಟ = ತಾಳ್ಮೆ + ಕೆಟ್ಟ

  2. ೨. ಪ್ರಾಣಾಪಾಯ = _______________ + _______________

    Answer

    ಪ್ರಾಣಾಪಾಯ = ಪ್ರಾಣ + ಅಪಾಯ

  3. ೩. ಮತ್ತೇನಾದರು = _______________ + _______________

    Answer

    ಮತ್ತೇನಾದರು = ಮತ್ತೆ + ಏನಾದರು

  4. ೪. ಪಣಕ್ಕಿಡು = _______________ + _______________

    Answer

    ಪಣಕ್ಕಿಡು = ಪಣಕ್ಕೆ + ಇಡು

  5. ೫. ಬೇಸರವಾಯಿತು = _______________ + _______________

    Answer

    ಬೇಸರವಾಯಿತು = ಬೇಸರ + ಆಯಿತು

ಈ) ಕೆಳಗೆ ನೀಡಿದ ಅನ್ಯದೇಶೀಯ ಪದಗಳಿಗೆ ಸಮಾನಾಂತರ ಕನ್ನಡ ಪದಗಳನ್ನು ಬರೆಯಿರಿ.

  1. ಮಾದರಿ : ನರ್ಸ್ - ದಾದಿ

  2. ೧. ಫೋನ್ - _______________

    Answer

    ೧. ಫೋನ್ - ದೂರವಾಣಿ

  3. ೨. ಆಪರೇಷನ್ - _______________

    Answer

    ೨. ಆಪರೇಷನ್ - ಶಸ್ತ್ರಚಿಕಿತ್ಸೆ

  4. ೩. ಥಿಯೇಟರ್ - _______________

    Answer

    ೩. ಥಿಯೇಟರ್ - ಚಿತ್ರಮಂದಿರ

  5. ೪. ರೂಂ - _______________

    Answer

    ೪. ರೂಂ - ಕೊಠಡಿ

  6. ೫. ಆಕ್ಸಿಡೆಂಟ್ - _______________

    Answer

    ೫. ಆಕ್ಸಿಡೆಂಟ್ - ಅಪಘಾತ

  7. ೬. ಸಿಸ್ಟರ್ - _______________

    Answer

    ೬. ಸಿಸ್ಟರ್ - ಸಹೋದರಿ

Interactive Lab