ಗದ್ಯ (prose) · ಪಂಜೆ ಮಂಗೇಶರಾಯರು (Panje Mangesharao)
ಪಠ್ಯFull text
ಒಂದಾನೊಂದು ಕಾಲದಲ್ಲಿ ಓರ್ವ ಮಂತ್ರವಾದಿಯಿದ್ದ. ತನ್ನ ಮಂತ್ರಶಕ್ತಿಯಿಂದ ಅವನು ಜನರಿಗೆ ಒಳ್ಳೆಯದಾಗುವ ಕೆಲಸಗಳನ್ನೆ ಮಾಡುತ್ತಿದ್ದ. ಆದ್ದರಿಂದ ಅವನನ್ನು ಜನರೂ ಮೆಚ್ಚಿಕೊಂಡಿದ್ದರು. ಒಂದು ದಿನ ಆ ಮಂತ್ರವಾದಿ ತನ್ನ ಮನೆಯ ಹೊರ ಜಗುಲಿಯ ಮೇಲೆ ಕುಳಿತಿದ್ದಾಗ ಅವನ ಹತ್ತಿರ ಒಂದು ಇಲಿ ಓಡಿ ಬಂದಿತು. "ಸ್ವಾಮಿ, ನನಗೆ ಬೆಕ್ಕಿನಿಂದ ಪ್ರಾಣಭಯವಿದೆ. ಅದಕ್ಕೆ ಹೆದರಿ ಹೆದರಿ ನನಗೆ ಸಾಕಾಗಿದೆ. ಆದ್ದರಿಂದ ನನ್ನನ್ನೇ ಬೆಕ್ಕಾಗಿ ಮಾಡಿಬಿಡಿ. ಧೈರ್ಯದಿಂದ ನಾನೂ ಓಡಾಡಬಹುದು" ಎಂದು ಬೇಡಿಕೊಂಡಿತು. ಆಗ ಆ ಮಂತ್ರವಾದಿಯು ಇಲಿಯನ್ನು ಬೆಕ್ಕಾಗಿ ಮಾಡಿದ. ಇಲಿಯು ಬೆಕ್ಕಾಗಿ ಓಡಿ ಹೊರಗೆ ಬಂದಿತು. ಆದರೆ ಈ ಬೆಕ್ಕನ್ನು ನಾಯಿಯೊಂದು ಅಟ್ಟಿಸಿಕೊಂಡು ಬಂದಿತು. "ಸ್ವಾಮಿ, ಬೆಕ್ಕಾದ ನನಗೆ ನಾಯಿಯಿಂದ ಪ್ರಾಣ ಭಯವಿದೆ. ಈಗ ನನ್ನನ್ನು ನಾಯಿಯನ್ನಾಗಿ ಮಾಡಿರಿ" ಎಂದು ಬೇಡಿಕೊಂಡಿತು.
ಆ ನಾಯಿಯು ಬೀದಿಯಲ್ಲಿ ಬರುತ್ತಿದ್ದಾಗ ಹಸುವೊಂದು ಅದನ್ನು ಅಟ್ಟಿಸಿಕೊಂಡು ಬಂದಿತು. ಭೀತಿಯಿಂದ ಮತ್ತೆ ನಾಯಿ ಮಂತ್ರವಾದಿಯ ಹತ್ತಿರ ಬಂದಿತು. "ಸ್ವಾಮಿ ನಾಯಿಯಾದ ನನಗೆ ಹಸುವಿನಿಂದ ಪ್ರಾಣಭಯವಿದೆ. ಆದ್ದರಿಂದ ನನ್ನನ್ನು ಹಸುವನ್ನಾಗಿ ಮಾಡಿರಿ" ಎಂದು ಬೇಡಿಕೊಂಡಿತು. ಮಂತ್ರವಾದಿಯು ಅದನ್ನು ಹಸುವನ್ನಾಗಿ ಮಾಡಿದ.
ಆ ಹಸುವು ಖುಷಿಯಿಂದ ಗುಡ್ಡಕ್ಕೆ ಓಡಿತು. ಆದರೆ ಅಲ್ಲಿದ್ದ ಹುಲಿಯೊಂದು ಅದರ ಮೇಲೆ ದಾಳಿಯಿಟ್ಟಿತು. ಹೇಗೋ ತಪ್ಪಿಸಿಕೊಂಡು ಮತ್ತೆ ಆ ಹಸುವು ಮಂತ್ರವಾದಿಯ ಹತ್ತಿರ ಬಂದಿತು. "ಸ್ವಾಮಿ, ಹಸುವಿಗೂ ಹುಲಿಯಿಂದ ಪ್ರಾಣ ಭಯವಿದೆ. ಆದ್ದರಿಂದ ನನ್ನನ್ನು ಹುಲಿಯನ್ನಾಗಿ ಮಾಡಿರಿ" ಎಂದು ಬೇಡಿಕೊಂಡಿತು. ಮಂತ್ರವಾದಿಯು ಅದನ್ನು ಹುಲಿಯನ್ನಾಗಿ ಮಾಡಿದ. ಹುಲಿಯಾಗಿ ಬದಲಾದ ತಕ್ಷಣ "ಎಲವೋ ಮಂತ್ರವಾದಿ, ನನಗೀಗ ವಿಪರೀತ ಹಸಿವೆಯಾಗಿದೆ. ಅದರಲ್ಲೂ ಮನುಷ್ಯ ಮಾಂಸವೆಂದರೆ ನನಗೆ ಬಹಳ ಇಷ್ಟ. ಈಗ ನೀನೇ ಸುಲಭದಲ್ಲಿ ಸಿಕ್ಕಿದ್ದೀಯಾ. ನಿನ್ನನ್ನೇ ಬಗೆದು ತಿನ್ನುತ್ತೇನೆ"
ಎಂದು ಅಬ್ಬರಿಸುತ್ತ ಮಂತ್ರವಾದಿಯ ಮೇಲೆ ಜಿಗಿಯಿತು.
ಆಗ ಮಂತ್ರವಾದಿಯು "ನೀನು ಹುಲಿಯಾಗಿರಲು ಅಯೋಗ್ಯನಾಗಿರುವೆ. ನಿನಗೆ ಉಪಕಾರ ಮಾಡಿದ ನನ್ನ ಪ್ರಾಣಕ್ಕೆ ಕುತ್ತು ತರುತ್ತೀಯಾ? ಆದರದು ನಿನ್ನಿಂದ ಸಾಧ್ಯವಿಲ್ಲ" ಎನ್ನುತ್ತ ಮತ್ತೆ ಅದರ ಮೇಲೆ ಮಂತ್ರಬೂದಿ ಊದಿದ.
ತಕ್ಷಣ ಅದು ಇಲಿಯಾಗಿ ಪರಿವರ್ತನೆ ಹೊಂದಿತು. ಮಂತ್ರವಾದಿ ಇಲಿಯನ್ನು ಗದರಿಸಲು ಅದು ಚೀಂವ್ ಚೀಂವ್ ಎಂದು ಚೀರುತ್ತ ಓಡಿ ಹೋಯಿತು.
– ಪಂಜೆ ಮಂಗೇಶರಾಯರು.