CRECT Education

Class 6 Kannada Lesson 7: Panchatantra (Prose) | KTBS Second Language – Learn the Story

Description

Learn the story of the Panchatantra – how it came to be and the clever fox who outsmarted a lion. Part 1: story walk-through & key vocabulary from the KTBS Class 6 Second Language Kannada textbook.

ಗದ್ಯ (prose) · ಎಂ. ಗೋಪಾಲಕೃಷ್ಣ ಅಡಿಗ (ಮೂಲ: ಮನೋಜ್‌ದಾಸ್‌)

ಪಠ್ಯFull text

ಪುರಾತನ ಕಾಲದಲ್ಲಿ ಒಬ್ಬ ರಾಜನಿಗೆ ಮೂರುಮಂದಿ ಗಂಡು ಮಕ್ಕಳಿದ್ದರು. ರಾಜಕುಮಾರರು ತಮ್ಮ ವಿದ್ಯಾಭ್ಯಾಸದ ಕಡೆಗೆ ಕೊಂಚವೂ ಲಕ್ಷ್ಯ ಕೊಡದೆ ಸೋಮಾರಿಗಳಾಗಿ ಕಾಲ ಕಳೆಯುತ್ತಿದ್ದರು. ಇದರಿಂದ ರಾಜನಿಗೆ ತುಂಬಾ ದುಃಖವಾಯಿತು. ಅವರು ಅದೇರೀತಿ ಸಮಯವನ್ನು ವ್ಯರ್ಥ ಮಾಡಿದರೆ ಪಟ್ಟಕ್ಕೆ ಬರಲು ಅವರಲ್ಲಿ ಒಬ್ಬನೂ ಅರ್ಹನಾಗುವುದಿಲ್ಲ ಎಂದು ರಾಜನಿಗೆ ಗೊತ್ತು. ಅನೇಕ ಅಧ್ಯಾಪಕರನ್ನು ರಾಜ ನೇಮಿಸಿಕೊಂಡ. ಆದರೆ ಎಲ್ಲವೂ ವ್ಯರ್ಥ. ಅಧ್ಯಾಪಕನೊಬ್ಬ ಕಣ್ಣಿಗೆ ಬಿದ್ದರೆ ಸಾಕು, ರಾಜಕುಮಾರರು ಭಯದಿಂದ ತತ್ತರಿಸಿ ಕಾಲಿಗೆ ಬುದ್ಧಿಹೇಳುತ್ತಿದ್ದರು. ಕಾಲ ಕಳೆಯುತ್ತ ಬಂತು; ರಾಜನ ನಿರಾಶೆಯೂ ಹೆಚ್ಚುತ್ತಾ ಹೋಯಿತು. ಕೊನೆಗೆ ರಾಜ ತನ್ನ ದೇಶದ ಎಲ್ಲ ವಿದ್ವಾಂಸರನ್ನೂ ಕರೆಸಿ ಒಂದು ಸಭೆ ಏರ್ಪಡಿಸಿ ಅವರಿಗೆ ತನ್ನ ಸಮಸ್ಯೆಯನ್ನು ವಿವರವಾಗಿ ಹೇಳಿದ. “ನಿಮ್ಮಲ್ಲಿ ಯಾರಾದರೂ ನನಗೆ ಸಹಾಯ ಮಾಡಬಲ್ಲಿರಾ?” ಎಂದು ಪ್ರಶ್ನಿಸಿದ. ಬಹಳ ಹೊತ್ತಿನವರೆಗೆ ಯಾರೂ ಉತ್ತರ ಕೊಡಲಿಲ್ಲ. ಕೊನೆಗೆ ಅವರಲ್ಲೊಬ್ಬ ಎದ್ದು ನಿಂತು, “ಮಹಾರಾಜರೇ, ತಾವು ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ನನ್ನ ಕೈಗೆ ಒಪ್ಪಿಸಿದರೆ ಕೈಲಾದುದ್ದನ್ನು ಮಾಡುತ್ತೇನೆ” ಎಂದ. ಈ ವಿದ್ವಾಂಸನೇ ವಿಷ್ಣುಶರ್ಮ. ತನ್ನ ಜ್ಞಾನದಿಂದ ಆತ ಇಡೀ ದೇಶದಲ್ಲಿ ಸುಪ್ರಸಿದ್ಧನಾಗಿದ್ದ. ಅಂಥ ಮನುಷ್ಯ ತನ್ನ ಮಕ್ಕಳಿಗೆ ಪಾಠ ಹೇಳಲು ಮುಂದೆ ಬಂದನೆಂದು ರಾಜನಿಗೆ ತುಂಬಾ ಸಂತೋಷವಾಯಿತು. ರಾಜನ ಅರಮನೆ ಬಹಳ ದೊಡ್ಡದು. ಅದರ ಸುತ್ತ ಎತ್ತರವಾದ ಮರಗಳಿದ್ದವು. ಉದ್ದವಾಗಿಯೂ, ತುಂಬ ಅಗಲವಾಗಿಯೂ ಇದ್ದ ಮೇಲ್ಛಾವಣಿಯ ಕೆಲವು ಭಾಗಗಳ ಮೇಲೆ ಈ ಮರಗಳು ನೆಳಲು ಚೆಲ್ಲುತ್ತಿದ್ದವು. ವಿಷ್ಣುಶರ್ಮ ಛಾವಣಿಯ ಮೇಲಿನ ಒಂದು ಏಕಾಂತವಾದ ಮೂಲೆಗೆ ರಾಜಕುಮಾರರನ್ನು ಕರೆದುಕೊಂಡು ಹೋದ. ಅಲ್ಲಿ ತನ್ನ ಮುಂದೆ ಅವರನ್ನು ಕುಳ್ಳಿರಿಸಿಕೊಂಡು ತಾನೂ ಕುಳಿತ. ವಿದ್ಯಾಭ್ಯಾಸವನ್ನು ದ್ವೇಷಿಸುತ್ತಿದ್ದ ಆ ರಾಜಕುಮಾರರಿಗೆ ಮೊದಮೊದಲು ಇದರಿಂದೇನೂ ಸಂತೋಷವಾಗಲಿಲ್ಲ. ಆದರೆ ಸ್ವಲ್ಪ ಹೊತ್ತಿನಲ್ಲಿಯೇ ಈ ಸ್ಥಳವನ್ನು ಬಿಟ್ಟು ಏಳಲೂ ಅವರಿಗೆ ಬೇಡವೆನ್ನಿಸಿತು. ವಿಷ್ಣುಶರ್ಮನ ವಿದ್ಯಾಭ್ಯಾಸದ ರೀತಿ ಅಪೂರ್ವ. ಅವನು ಹೀಗೆ ಆರಂಭಿಸಿದ: “ಗೋದಾವರಿ ನದೀ ತೀರದಲ್ಲಿ ದೊಡ್ಡದೊಂದು ಮರ. ಬೇರೆ ಬೇರೆ ದಿಕ್ಕುಗಳಿಂದ ಬರುತ್ತಿದ್ದ ಪಕ್ಷಿಗಳೆಲ್ಲ ರಾತ್ರಿ ಹೊತ್ತು ಆ ಮರದಲ್ಲಿ ಆಶ್ರಯ ಪಡೆಯುತ್ತಿದ್ದವು.......” ಹೀಗೆ ಅವನು ಕಥೆಗಳನ್ನು ಹೇಳುತ್ತ ಹೋದ. ಅವೆಲ್ಲ ಮೃಗಪಕ್ಷಿಗಳನ್ನು ಕುರಿತ ಕಥೆಗಳು. ಆದರೆ ನಿಜವಾಗಿ ಅವು ನಮ್ಮ ಬಗ್ಗೆಯೇ ಇರುವಂಥವು; ಮನುಷ್ಯನ ಬೇರೆ ಬೇರೆ ಸಮಸ್ಯೆಗಳನ್ನೂ ಅವುಗಳ ಪರಿಹಾರಗಳನ್ನೂ ಕುರಿತ ಕಥನಗಳು. ಆದರ್ಶ ಸ್ನೇಹಿತ ಯಾರು? ಗೆಳೆತನವನ್ನು ಉಳಿಸಿಕೊಂಡು ಬರುವುದು ಹೇಗೆ? ನಮಗೆ ವಿನಾಶ ತರಬಲ್ಲ ಆಸೆಗಳಿಂದ ತಪ್ಪಿಸಿಕೊಳ್ಳುವುದು ಹೇಗೆ? ಒಳ್ಳೆಯವನಾಗಿದ್ದೂ ಜಾಗರೂಕನಾಗಿರುವುದರಿಂದ, ಉದಾತ್ತನಾಗಿದ್ದೂ ಚತುರನಾಗಿರುವುದರಿಂದ ಲಾಭವಿದೆ ಎಂಬುದನ್ನು ಈ ಕಥೆಗಳು ತೋರಿಸಿಕೊಡುತ್ತವೆ. ವಿಷ್ಣುಶರ್ಮನ ಜೊತೆಗೆ ಕುಳಿತಿದ್ದರಿಂದ ಹುಡುಗರು ತಿಳಿವಳಿಕೆಯನ್ನೂ ವ್ಯವಹಾರ ಜ್ಞಾನವನ್ನೂ ಪಡೆದರು. ಪಂಚತಂತ್ರದ ಕಥೆಗಳನ್ನು ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಮತ್ತೆ ಮತ್ತೆ ಹೇಳಲಾಗಿದೆ. ನೀವು ಕೂಡಾ ಈ ಕಥೆಗಳಲ್ಲಿ ಬೇಕಾದಷ್ಟು ಕಥೆಗಳನ್ನು ಓದಿರಬೇಕು. ಆದರೆ ಕೆಲವು ಕಥೆಗಳು ಅಷ್ಟು ಜನಪ್ರಿಯವಾಗಿಲ್ಲದೆ ಇದ್ದರೂ ಕಥಾಲೇಖದಲ್ಲಿ ಅವು ರತ್ನಗಳಂತೆ ಇವೆ. ಉದಾಹರಣೆಗೆ, 'ಮಾತಾಡುವ ಗುಹೆ' ಎಂಬ ಕಥೆಯನ್ನು ತೆಗೆದುಕೊಳ್ಳಬಹುದು. ಇದು ತುಂಬ ರಸಭರಿತವಾದ ಕಥೆಯಾಗಿರುವುದು ಮಾತ್ರವಲ್ಲದೆ ಪ್ರತಿಯೊಬ್ಬನೂ ಯಾವಾಗಲೂ ತನ್ನ ಬಗ್ಗೆ ಎಚ್ಚರಿಕೆಯಿಂದಿದ್ದು, ಆತ್ಮರಕ್ಷಣೆಗೆ ಸಿದ್ಧನಾಗಿರಬೇಕೆಂಬ ಪಾಠವನ್ನು ಕಲಿಸುತ್ತದೆ. ಒಂದಾನೊಂದು ಕಾಲದಲ್ಲಿ ಒಂದು ಕಾಡಿನಲ್ಲಿ ಒಂದು ನರಿ ಇತ್ತು. ನಿರ್ಜನವಾದ ಪ್ರದೇಶದಲ್ಲಿದ್ದ ಗುಹೆಯೊಂದರಲ್ಲಿ ಅದರ ವಾಸ. ಒಂದು ದಿನ ನರಿ ಅಲ್ಲಿ ಇಲ್ಲದೆ ಇದ್ದಾಗ ಹಸಿವೆಯಿಂದ ಕಂಗಾಲಾಗಿದ್ದ ಸಿಂಹವೊಂದು ಅಲ್ಲಿಗೆ ಬಂತು. ಗುಹೆಯನ್ನು ಹೊಕ್ಕು ಆ ಸಿಂಹ ಸುತ್ತಲೂ ಮೂಸಿ ನೋಡಿತು. ಅದು ನರಿಯ ವಾಸಸ್ಥಳ ಎಂಬುದರಲ್ಲಿ ಸಂದೇಹವಿಲ್ಲ ಎಂದು ಸಿಂಹ ಭಾವಿಸಿತು. ಆಹಾರ ಹುಡುಕಿಕೊಂಡು ನಾನು ಅಲೆಯುವುದು ಏಕೆ? ಇಲ್ಲಿ ಕೊಂಚ ಒರಗಿಕೊಂಡು ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ನರಿ ಹಿಂತಿರುಗಿ ಬಂದಾಗ ನನಗೆ ಸವಿಯೂಟ ಸಿಕ್ಕದೇ? ಮುಸ್ಸಂಜೆಯ ಹೊತ್ತಿಗೆ ನರಿ ಮನೆಗೆ ಮರಳಿ ಬಂತು. ಗುಹೆಯನ್ನು ಪ್ರವೇಶಿಸಬೇಕು ಎನ್ನುವಾಗ ಅದಕ್ಕೆ ಸಿಂಹದ ಅಸ್ಪಷ್ಟ ಹೆಜ್ಜೆಯ ಗುರುತುಗಳು ಕಂಡವು. ಅದರ ಹೃದಯ ಜೋರಾಗಿ ಬಡಿದುಕೊಳ್ಳತೊಡಗಿತು. ಆನಂತರ ಅದು ಧೈರ್ಯ ತಂದುಕೊಂಡು ಗಟ್ಟಿಯಾಗಿ ಕೂಗಿ ಹೇಳಿತು: “ಎಲೈ ಮಾತಾಡುವ ಗುಹೆಯೇ, ನಿನಗೇನಾಗಿದೆ? ಸಾಮಾನ್ಯವಾಗಿ ನಾನು ಮನೆಗೆ ಬಂದಾಗಲೆಲ್ಲ ನೀನು ನನ್ನನ್ನು ಕುರಿತು 'ನರಿಯೇ ದಯಮಾಡಿಸಬೇಕು' ಎಂದು ಹೇಳಿ ನನ್ನನ್ನು ಬರಮಾಡಿಕೊಳ್ಳುತ್ತಿದ್ದೆ. ಆದರೆ ಈ ದಿನ ನೀನು ಮೌನ. ನಾನು ಒಳಕ್ಕೆ ಬರಬಾರದು ಎಂದು ನಿನ್ನ ಇಷ್ಟ ಎಂದು ನಾನು ನಂಬಲೇ?” ಸಿಂಹ ತನ್ನಷ್ಟಕ್ಕೆ ಹೀಗೆ ಯೋಚಿಸಿತು: “ನಾನು ಇಲ್ಲಿ ಇರುವುದರಿಂದ ಈ ಗುಹೆಗೆ ಹೆದರಿಕೆಯಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಆ ಕಾರಣದಿಂದಲೇ ಅದು ನರಿಯನ್ನು ಸ್ವಾಗತಿಸುತ್ತಿಲ್ಲ.” ಹೀಗೆಂದು ಸಿಂಹ ಜೋರಾಗಿ ಗರ್ಜಿಸಿ ಹೇಳಿತು: “ನರಿರಾಯರೇ ಬರಬೇಕು, ಬರಬೇಕು.” ತನ್ನ ಜೀವ ಉಳಿಸಿಕೊಳ್ಳುವುದಕ್ಕಾಗಿ ಪಲಾಯನ ಮಾಡುತ್ತ ನರಿ ಊಳಿ ಹೇಳಿತು: “ಪ್ರಿಯ ಗುಹೆಯೇ, ನಿನ್ನನ್ನು ತ್ಯಜಿಸಿ ಹೋಗಲು ನಾನು ನಿಶ್ಚಯಿಸಿದ್ದೇನೆ.” ತನ್ನಷ್ಟಕ್ಕೆ ತಾನು ಒಳಗೊಳಗೆ ನಗುತ್ತ ನರಿ ಹೀಗೆ ಅಂದುಕೊಂಡಿತು: ಮಾತಾಡುವ ಗುಹೆ ಅಲ್ಲವಾ? ಇಂಥ ಸಂಗತಿಯನ್ನು ಕೇಳೇ ಇಲ್ಲ. ದೇವರ ದಯೆ ಬಚಾವಾದೆ!

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ :

  1. | | |

  2. |---|---|

  3. | ಅಪೂರ್ವ - ಅಪರೂಪದ; ಶ್ರೇಷ್ಠವಾದ. | ಉದಾತ್ತ - ಶ್ರೇಷ್ಠ |

  4. | ಊಳಿ - ಗಟ್ಟಿಯಾಗಿ ಕೂಗಿ | ಏಕಾಂತ - ಪ್ರಶಾಂತ ಸ್ಥಳ |

  5. | ಕಂಗಾಲು - ದುರ್ಬಲವಾಗು | ಕಾಲಿಗೆ ಬುದ್ಧಿಹೇಳು - ಓಡಿಹೋಗು |

  6. | ಕೊಂಚ - ಸ್ವಲ್ಪ | ಗುಹೆ - ಗವಿ; ಕಲ್ಲಿನ ದೊಡ್ಡಪೊಟರೆ. |

  7. | ಛಾವಣಿ - ಮಾಳಿಗೆ; ಮನೆ ಮೇಲಿನ ಆವರಣ. | ನಿಶ್ಚಯಿಸು - ನಿರ್ಧರಿಸು; ಗೊತ್ತುಮಾಡು. |

  8. | ನಿರ್ಜನ - ಜನ ವಸತಿ ಇಲ್ಲದ | ಪಟ್ಟ - ಅಧಿಕಾರ; ಸ್ಥಾನ. |

  9. | ಪಲಾಯನ - ಓಟ; ಪರಾರಿ; ತಪ್ಪಿಸಿಕೊ. | ಮಂದಿ - ಜನ |

  10. | ಮುಸ್ಸಂಜೆ - ಸೂರ್ಯ ಮುಳುಗುವ ಸಮಯ. | ಲಕ್ಷ್ಯ - ಗಮನ |

  11. | ವ್ಯರ್ಥ - ನಿರುಪಯುಕ್ತ | ಸಂದೇಹ - ಸಂಶಯ; ಅನುಮಾನ. |

  12. | ಪುರಾತನ - ಹಳೆಯ ಕಾಲದ | |

II. ಪ್ರಶ್ನೆಗಳು :

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ರಾಜನಿಗೆ ತನ್ನ ಮಕ್ಕಳ ಬಗ್ಗೆ ಏಕೆ ದುಃಖವಾಯಿತು?

    Answer

    ರಾಜಕುಮಾರರು ವಿದ್ಯಾಭ್ಯಾಸದ ಕಡೆಗೆ ಲಕ್ಷ್ಯ ಕೊಡದೆ ಸೋಮಾರಿಗಳಾಗಿ ಕಾಲ ಕಳೆಯುತ್ತಿದ್ದುದರಿಂದ ರಾಜನಿಗೆ ದುಃಖವಾಯಿತು.

  2. ೨. ರಾಜನು ವಿದ್ವಾಂಸರ ಸಭೆಯನ್ನು ಏಕೆ ಕರೆದನು?

    Answer

    ರಾಜನು ತನ್ನ ಮಕ್ಕಳ ವಿದ್ಯಾಭ್ಯಾಸದ ಸಮಸ್ಯೆಗೆ ಸಹಾಯ ಪಡೆಯಲು ವಿದ್ವಾಂಸರ ಸಭೆಯನ್ನು ಕರೆದನು.

  3. ೩. ವಿಷ್ಣುಶರ್ಮನು ರಾಜನಿಗೆ ಏನೆಂದು ಹೇಳಿದನು?

    Answer

    ವಿಷ್ಣುಶರ್ಮನು ರಾಜನಿಗೆ ತನ್ನ ಮಕ್ಕಳ ವಿದ್ಯಾಭ್ಯಾಸವನ್ನು ತನ್ನ ಕೈಗೆ ಒಪ್ಪಿಸಿದರೆ ಕೈಲಾದುದ್ದನ್ನು ಮಾಡುವುದಾಗಿ ಹೇಳಿದನು.

  4. ೪. ವಿಷ್ಣುಶರ್ಮ ಕಥೆಗಳನ್ನು ಹೇಗೆ ಆರಂಭಿಸುತ್ತಿದ್ದನು?

    Answer

    ವಿಷ್ಣುಶರ್ಮನು ಗೋದಾವರಿ ನದೀ ತೀರದಲ್ಲಿನ ದೊಡ್ಡ ಮರದ ಕಥೆ ಹೇಳುವ ಮೂಲಕ ಕಥೆಗಳನ್ನು ಆರಂಭಿಸುತ್ತಿದ್ದನು.

  5. ೫. ಸಿಂಹವು ನರಿಯನ್ನು ಹೇಗೆ ಸ್ವಾಗತಿಸಿತು?

    Answer

    ಸಿಂಹವು ಜೋರಾಗಿ ಗರ್ಜಿಸಿ “ನರಿರಾಯರೇ ಬರಬೇಕು, ಬರಬೇಕು” ಎಂದು ಹೇಳಿ ನರಿಯನ್ನು ಸ್ವಾಗತಿಸಿತು.

  6. ೬. ನರಿಯು ತನ್ನ ಗುಹೆಯನ್ನು ಏಕೆ ತ್ಯಜಿಸಿತು?

    Answer

    ಗುಹೆಯೊಳಗೆ ಸಿಂಹ ಇರುವುದನ್ನು ತಿಳಿದು ನರಿಯು ತನ್ನ ಜೀವ ಉಳಿಸಿಕೊಳ್ಳಲು ಗುಹೆಯನ್ನು ತ್ಯಜಿಸಿತು.

  7. ೭. 'ಮಾತನಾಡುವ ಗುಹೆ' ಕಥೆಯ ನೀತಿ ಏನು?

    Answer

    ಪ್ರತಿಯೊಬ್ಬನೂ ಯಾವಾಗಲೂ ತನ್ನ ಬಗ್ಗೆ ಎಚ್ಚರಿಕೆಯಿಂದಿದ್ದು, ಆತ್ಮರಕ್ಷಣೆಗೆ ಸಿದ್ಧನಾಗಿರಬೇಕು ಎಂಬುದು ಈ ಕಥೆಯ ನೀತಿ.

ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ವಿಷ್ಣುಶರ್ಮನು ಯಾರು? ಆತನ ಮಾತುಗಳಿಂದ ರಾಜನಿಗೆ ಏಕೆ ಸಂತೋಷವಾಯಿತು?

    Answer

    ವಿಷ್ಣುಶರ್ಮನು ತನ್ನ ಜ್ಞಾನದಿಂದ ಇಡೀ ದೇಶದಲ್ಲಿ ಸುಪ್ರಸಿದ್ಧನಾಗಿದ್ದ ವಿದ್ವಾಂಸ. ಅಂಥ ಪ್ರಸಿದ್ಧ ವಿದ್ವಾಂಸನು ತನ್ನ ಮಕ್ಕಳಿಗೆ ಪಾಠ ಹೇಳಲು ಮುಂದೆ ಬಂದಿದ್ದರಿಂದ ರಾಜನಿಗೆ ಸಂತೋಷವಾಯಿತು.

  2. ೨. ವಿಷ್ಣುಶರ್ಮನು ರಾಜಕುಮಾರರಿಗೆ ಪಾಠ ಹೇಳಿಕೊಡುತ್ತಿದ್ದ ಸ್ಥಳ ಯಾವ ರೀತಿ ಇತ್ತು?

    Answer

    ವಿಷ್ಣುಶರ್ಮನು ಅರಮನೆಯ ಛಾವಣಿಯ ಮೇಲಿನ ಒಂದು ಏಕಾಂತವಾದ ಮೂಲೆಯಲ್ಲಿ ರಾಜಕುಮಾರರಿಗೆ ಪಾಠ ಹೇಳಿಕೊಡುತ್ತಿದ್ದನು. ಅಲ್ಲಿ ಎತ್ತರವಾದ ಮರಗಳ ನೆರಳು ಚೆಲ್ಲುತ್ತಿತ್ತು.

  3. ೩. ಸಿಂಹವು ನರಿ ಗುಹೆಯಲ್ಲಿಯೇ ಏಕೆ ಉಳಿಯಿತು?

    Answer

    ಸಿಂಹವು ನರಿಯು ಹಿಂತಿರುಗಿ ಬಂದಾಗ ಅದನ್ನು ತಿನ್ನಬಹುದೆಂದು ಯೋಚಿಸಿ, ವಿಶ್ರಾಂತಿ ತೆಗೆದುಕೊಳ್ಳಲು ಗುಹೆಯಲ್ಲಿಯೇ ಉಳಿಯಿತು.

  4. ೪. ನರಿಯು ಗುಹೆಯ ಒಳಗೆ ಸಿಂಹ ಇರುವುದನ್ನು ಹೇಗೆ ಪರೀಕ್ಷಿಸಿತು?

    Answer

    ನರಿಯು ಗುಹೆಯನ್ನು “ಎಲೈ ಮಾತಾಡುವ ಗುಹೆಯೇ, ನಿನಗೇನಾಗಿದೆ?” ಎಂದು ಕೂಗಿ ಕೇಳಿತು. ಆಗ ಸಿಂಹವು ಗರ್ಜಿಸಿ ಉತ್ತರಿಸಿದ್ದರಿಂದ ನರಿಗೆ ಒಳಗೆ ಸಿಂಹ ಇರುವುದು ಖಚಿತವಾಯಿತು.

ಇ) ಈ ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಪಂಚತಂತ್ರದ ಕಥೆಗಳು ಹುಟ್ಟಿಕೊಂಡದ್ದು ಹೇಗೆ?

    Answer

    ಪುರಾತನ ಕಾಲದಲ್ಲಿ ಒಬ್ಬ ರಾಜನಿಗೆ ಮೂವರು ಸೋಮಾರಿ ಮಕ್ಕಳಿದ್ದರು. ಅವರು ವಿದ್ಯಾಭ್ಯಾಸದ ಕಡೆಗೆ ಲಕ್ಷ್ಯ ಕೊಡದೆ ಕಾಲ ಕಳೆಯುತ್ತಿದ್ದರು. ರಾಜನು ಅನೇಕ ಅಧ್ಯಾಪಕರನ್ನು ನೇಮಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ರಾಜನು ಎಲ್ಲ ವಿದ್ವಾಂಸರ ಸಭೆ ಕರೆದು ತನ್ನ ಸಮಸ್ಯೆ ಹೇಳಿದನು. ಆಗ ವಿಷ್ಣುಶರ್ಮ ಎಂಬ ಸುಪ್ರಸಿದ್ಧ ವಿದ್ವಾಂಸನು ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ವಹಿಸಿಕೊಂಡನು. ವಿಷ್ಣುಶರ್ಮನು ರಾಜಕುಮಾರರನ್ನು ಅರಮನೆಯ ಛಾವಣಿಯ ಮೇಲಿನ ಏಕಾಂತ ಮೂಲೆಗೆ ಕರೆದೊಯ್ದನು. ಅಲ್ಲಿ ಅವನು ಮೃಗಪಕ್ಷಿಗಳ ಕಥೆಗಳ ಮೂಲಕ ಪಾಠ ಹೇಳಲು ಆರಂಭಿಸಿದನು. ಈ ಕಥೆಗಳು ಮನುಷ್ಯನ ಸಮಸ್ಯೆಗಳು ಮತ್ತು ಪರಿಹಾರಗಳನ್ನು ಕುರಿತವಾಗಿದ್ದವು. ಹೀಗೆ ವಿಷ್ಣುಶರ್ಮನು ಹೇಳಿದ ಕಥೆಗಳೇ ಪಂಚತಂತ್ರದ ಕಥೆಗಳಾಗಿ ಹುಟ್ಟಿಕೊಂಡವು.

  2. ೨. 'ಮಾತನಾಡುವ ಗುಹೆ' ಕಥೆಯನ್ನು ನಿಮ್ಮದೇ ಮಾತುಗಳಲ್ಲಿ ಬರೆಯಿರಿ.

    Answer

    ಒಂದು ಕಾಡಿನಲ್ಲಿ ಒಂದು ನರಿ ನಿರ್ಜನ ಪ್ರದೇಶದ ಗುಹೆಯಲ್ಲಿ ವಾಸಿಸುತ್ತಿತ್ತು. ಒಂದು ದಿನ ನರಿ ಹೊರಗೆ ಹೋದಾಗ ಹಸಿದ ಸಿಂಹವೊಂದು ಆ ಗುಹೆಗೆ ಬಂತು. ಸಿಂಹವು ಗುಹೆಯನ್ನು ಮೂಸಿ ನೋಡಿ ಅದು ನರಿಯ ವಾಸಸ್ಥಳವೆಂದು ತಿಳಿಯಿತು. ಅದು ನರಿಯು ಹಿಂತಿರುಗಿದಾಗ ತಿನ್ನಬಹುದೆಂದು ಯೋಚಿಸಿ ಅಲ್ಲಿಯೇ ಉಳಿಯಿತು. ಮುಸ್ಸಂಜೆಯ ಹೊತ್ತಿಗೆ ನರಿ ಮರಳಿ ಬಂದಾಗ ಸಿಂಹದ ಹೆಜ್ಜೆ ಗುರುತುಗಳನ್ನು ಕಂಡು ಹೆದರಿತು. ಆದರೆ ಧೈರ್ಯ ತಂದುಕೊಂಡು ನರಿಯು ಗುಹೆಯನ್ನು “ಎಲೈ ಮಾತಾಡುವ ಗುಹೆಯೇ, ನಿನಗೇನಾಗಿದೆ?” ಎಂದು ಕೂಗಿ ಕೇಳಿತು. ಸಿಂಹವು ತನ್ನ ಇರುವಿಕೆಯಿಂದ ಗುಹೆ ಮೌನವಾಗಿದೆ ಎಂದು ಭಾವಿಸಿ “ನರಿರಾಯರೇ ಬರಬೇಕು” ಎಂದು ಗರ್ಜಿಸಿತು. ಆಗ ನರಿಗೆ ಒಳಗೆ ಸಿಂಹ ಇರುವುದು ಖಚಿತವಾಗಿ, ತನ್ನ ಜೀವ ಉಳಿಸಿಕೊಳ್ಳಲು ಅದು ಪಲಾಯನ ಮಾಡಿತು. ಹೀಗೆ ನರಿಯು ತನ್ನ ಬುದ್ಧಿವಂತಿಕೆಯಿಂದ ಅಪಾಯದಿಂದ ಪಾರಾಯಿತು.

ಈ) ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ತಿಳಿಸಿರಿ.

  1. ೧. “ನಿಮ್ಮಲ್ಲಿ ಯಾರಾದರೂ ನನಗೆ ಸಹಾಯ ಮಾಡಬಲ್ಲಿರಾ?”

    Answer

    ರಾಜನು ವಿದ್ವಾಂಸರಿಗೆ ಹೇಳಿದನು.

  2. ೨. “ಎಲೈ ಮಾತಾಡುವ ಗುಹೆಯೇ, ನಿನಗೇನಾಗಿದೆ?”

    Answer

    ನರಿಯು ಗುಹೆಗೆ ಹೇಳಿತು.

  3. ೩. “ನರಿರಾಯರೇ, ಬರಬೇಕು, ಬರಬೇಕು.”

    Answer

    ಸಿಂಹವು ನರಿಗೆ ಹೇಳಿತು.

III. ಭಾಷಾಭ್ಯಾಸ :

ಅ) ಇಲ್ಲಿರುವ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

  1. ೧. ದುಃಖ x .....................................................

    Answer

    ದುಃಖ x ಸಂತೋಷ

  2. ೨. ಅರ್ಹ x .....................................................

    Answer

    ಅರ್ಹ x ಅನರ್ಹ

  3. ೩. ಜ್ಞಾನ x .....................................................

    Answer

    ಜ್ಞಾನ x ಅಜ್ಞಾನ

  4. ೪. ಅಸ್ಪಷ್ಟ x .....................................................

    Answer

    ಅಸ್ಪಷ್ಟ x ಸ್ಪಷ್ಟ

  5. ೫. ಲಕ್ಷ್ಯ x .....................................................

    Answer

    ಲಕ್ಷ್ಯ x ಅಲಕ್ಷ್ಯ

  6. ೬. ನಿರಾಶೆ x .....................................................

    Answer

    ನಿರಾಶೆ x ಆಶೆ

  7. ೭. ದ್ವೇಷ x .....................................................

    Answer

    ದ್ವೇಷ x ಪ್ರೀತಿ

  8. ೮. ಧೈರ್ಯ x .....................................................

    Answer

    ಧೈರ್ಯ x ಭಯ

ಆ) ಇಲ್ಲಿರುವ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.

  1. ೧. ವಿದ್ಯಾಭ್ಯಾಸ : __________________________________________________________________

    Model sentence

    ವಿದ್ಯಾಭ್ಯಾಸ: ನನ್ನ ಅಣ್ಣನ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ನಡೆಯುತ್ತಿದೆ.

  2. ೨. ಅಪೂರ್ವ : __________________________________________________________________

    Model sentence

    ಅಪೂರ್ವ: ನಿನ್ನೆ ನಮ್ಮ ಶಾಲೆಯಲ್ಲಿ ಅಪೂರ್ವವಾದ ಗಿಳಿಯೊಂದು ಕಾಣಿಸಿತು.

  3. ೩. ಪರಿಹಾರ : __________________________________________________________________

    Model sentence

    ಪರಿಹಾರ: ನನ್ನ ಸಮಸ್ಯೆಗೆ ಶಿಕ್ಷಕರು ಪರಿಹಾರ ಸೂಚಿಸಿದರು.

  4. ೪. ಸಂದೇಹ : __________________________________________________________________

    Model sentence

    ಸಂದೇಹ: ನನಗೆ ಈ ಲೆಕ್ಕದಲ್ಲಿ ಸಂದೇಹವಿದೆ.

  5. ೫. ನಿಶ್ಚಯಿಸು : __________________________________________________________________

    Model sentence

    ನಿಶ್ಚಯಿಸು: ನಾನು ಮುಂದಿನ ವರ್ಷ ಚೆನ್ನಾಗಿ ಓದಲು ನಿಶ್ಚಯಿಸಿದ್ದೇನೆ.

ಇ) ಇಲ್ಲಿರುವ ಪದಗಳನ್ನು ಮಾದರಿಯಂತೆ ಬಿಡಿಸಿ ಬರೆಯಿರಿ.

  1. ಮಾದರಿ : ವಿದ್ಯಾಭ್ಯಾಸ = ವಿದ್ಯಾ + ಅಭ್ಯಾಸ

  2. ೧. ಅವರಲ್ಲೊಬ್ಬ = _________________ + _________________

    Answer

    ಅವರಲ್ಲೊಬ್ಬ = ಅವರಲ್ಲಿ + ಒಬ್ಬ

  3. ೨. ಮರಗಳಿದ್ದವು = _________________ + _________________

    Answer

    ಮರಗಳಿದ್ದವು = ಮರಗಳು + ಇದ್ದವು

  4. ೩. ಒಳಗೊಳಗೆ = _________________ + _________________

    Answer

    ಒಳಗೊಳಗೆ = ಒಳಗೆ + ಒಳಗೆ

  5. ೪. ದುಃಖವಾಯಿತು = _________________ + _________________

    Answer

    ದುಃಖವಾಯಿತು = ದುಃಖ + ಆಯಿತು

  6. ೫. ಗುಹೆಯನ್ನು = _________________ + _________________

    Answer

    ಗುಹೆಯನ್ನು = ಗುಹೆ + ಅನ್ನು

IV. ಚಟುವಟಿಕೆಗಳು :

  1. ಅ) ಸಿಂಹ, ನಾಯಿ, ನರಿ, ಬೆಕ್ಕು, ಗಿಳಿ, ಕೋಗಿಲೆಗಳ ಧ್ವನಿಯನ್ನು ಅನುಕರಣೆ ಮಾಡಿ.

  2. ಆ) 'ಮಾತನಾಡುವ ಗುಹೆ' ಕಥೆಯನ್ನು ಹಾವಭಾವಗಳೊಂದಿಗೆ ತರಗತಿಯಲ್ಲಿ ಹೇಳಿರಿ.

  3. ಇ) ನಿಮಗೆ ಪ್ರಿಯವಾದ ಪ್ರಾಣಿಗಳ ಚಿತ್ರ ಅಂಟಿಸಿ, ಅವು ನಿಮಗೆ ಏಕೆ ಇಷ್ಟ? ಹೇಳಿರಿ.

  4. (A diagram with three colored blank boxes for pasting animal pictures).

  5. ಈ) ಕೆಳಗೆ ನೀಡಿರುವ ಚಿತ್ರಗಳನ್ನು ಗಮನಿಸಿ, ಕಥೆ ಹೇಳಿರಿ. ಅದರ ನೀತಿ ತಿಳಿಯಿರಿ.

  6. (Two illustrations showing the classic story of the tortoise and the hare race. The first shows the hare sleeping under a tree while the tortoise slowly walks past. The second shows the tortoise crossing the finish line while the hare desperately runs toward it).

  7. ಉ) ಕೆಳಗೆ ನೀಡಿರುವ ಸುಳಿವು ಬಳಸಿಕೊಂಡು 'ಹೊಗಳಿಕೆಗೆ ಉಬ್ಬಬೇಡ' ಎಂಬ ನಾಣ್ಣುಡಿಗೆ ಸೂಕ್ತ ಕಥೆ ಹೇಳುತ್ತಾ ಅಭಿನಯಿಸಿರಿ.

  8. ಸುಳಿವು : ಕಾಗೆಯೊಂದು ಮಾಂಸದ ತುಂಡು ಕಚ್ಚಿಕೊಂಡು ಮರದ ಮೇಲೆ ಇತ್ತು. ನರಿ ಅದರ ಹಾಡನ್ನು ವರ್ಣಿಸಿ ಹಾಡಲು ಹೇಳುವುದು. ಕಾಗೆ ಹಾಡಲು ಬಾಯಿ ತೆರೆದಾಗ ಮಾಂಸದ ತುಂಡು ನೆಲಕ್ಕೆ ಬಿತ್ತು.

Interactive Lab